21.4 C
Bengaluru
Saturday, July 27, 2024

ಮನೆ ವಾಸ್ತು: ಯಾವ ದಿಕ್ಕಿನಲ್ಲಿ ಓದುವ ಕೋಣೆ ಇದ್ದರೆ ಅದೃಷ್ಟ ಬರುತ್ತೆ ?

ನೆಮ್ಮದಿ ಜೀವನ ಸಾಗಿಸಬೇಕು, ಆರೋಗ್ಯವಂತರಾಗಿರಬೇಕು. ಮನೆಯಲ್ಲಿ ಯಾವುದೇ ತೊಂದರೆ ಅನುಭವಿಸಬಾರದು ಎಂಬುದು ಪ್ರತಿಯೊಬ್ಬರ ಆಸೆ. ಹೀಗಾಗಿ ಬಹುತೇಕರು ವಾಸ್ತು ನೋಡಿಯೇ ಮನೆ ಕಟ್ಟುತ್ತಾರೆ. ವಾಸ್ತು ಪ್ರಕಾರ ಮನೆ ಕಟ್ಟೋದೊಂದೆ ಮುಖ್ಯವಲ್ಲ. ಯಾವ ದಿಕ್ಕಿನಲ್ಲಿ ಏನು ಇರಬೇಕು. ಯಾವ ವಸ್ತು ಇಡಬೇಕು ಎಂಬುದು ಕೂಡ ಮುಖ್ಯ. ಮನೆಯ ಯಾವ ದಿಕ್ಕಿನಲ್ಲಿ ಯಾವ ದೇವರು ಇರ್ತಾರೆ. ಯಾವ ದಿಕ್ಕಿನಲ್ಲಿಯಾವ ಕೋಣೆ ಕಟ್ಟಬೇಕು. ಏನು ವಸ್ತು ಇಟ್ಟರೆ ಒಳ್ಳೆದಾಗುತ್ತದೆ ಎಂಬುದು ವಾಸ್ತುತಜ್ಞ ನಯನ್ ಕುಮಾರ್ ಅವರು ಜನ ಸಾಮಾನ್ಯರಿಗೆ ಇಲ್ಲಿ ತಿಳಿಸಿಕೊಟ್ಟಿದ್ದಾರೆ.

ವಾಸ್ತು ಎಂಬುದು ಅನಾದಿ ಕಾಲದಿಂದಲೂ ಪಾಲನೆ ಮಾಡುತ್ತಾರೆ. ಗ್ರಹಗಳು, ಪಂಚತತ್ವಗಳ ಆಧಾರದ ಮೇಲೆ ವಾಸ್ತು ಸೃಷ್ಟಿಸಲಾಗಿದೆ. ಅದರಲ್ಲೂ ವೇದಿಕ್ ವಾಸ್ತುವನ್ನು ಅನಾದಿ ಕಾಲದಿಂದಲು ಪಾಲನೆ ಮಾಡುತ್ತಿದ್ದಾರೆ. ವೇದಿಕ್ ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿನಲ್ಲಿ ಏನಿರಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಹೀಗೆ ಮಾಡುವುದರಿಂದ ಮನೆ ಮಂದಿಯಲ್ಲಾ ಸಂತಸವಾಗಿರುತ್ತಾರೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಈಶಾನ್ಯ ದಿಕ್ಕಿನಲ್ಲಿ ಏನಿರಬೇಕು?
ಈಶಾನ್ಯ ದಿಕ್ಕಿಗೆ ಈಶಾನ ದೇವರು ಅಧಿಪತಿ. ಗುರು ಮತ್ತು ಖೇತು ಈ ಜಾಗದ ಗ್ರಹಗಳು. ಇಲ್ಲಿ ಜಲ ತತ್ವ ಪ್ರಭಾವ ಬೀರುತ್ತದೆ. ತತ್ವಶಾಸ್ತ್ರದ ಪ್ರಕಾರ ದೇವರ ಆಶೀರ್ವಾದ, ರಚನಾತ್ಮಕ ಗುಣ ಇಲ್ಲಿರುತ್ತದೆ. ಮಕ್ಕಳಿಗೆ ಸಂಬಂಧಪಟ್ಟ ಜಾಗ ಎಂಥಲು ಪರಿಗಣಿಸಲಾಗುತ್ತದೆ. ಮೋಕ್ಷ ಸಿಗುವ ಜಾಗ ಕೂಡ ಹೌದು. ಈ ದಿಕ್ಕಿನಲ್ಲಿ ಪೂಜಾ ಕೊಠಡಿ, ಮನೆಯ ಪ್ರವೇಶ , ನೀರಿನ ಸಂಪು, ವರಂಡಾ, ಪೋಟಿಕೋ ಇಟ್ಟರೆ ಒಳ್ಳೆಯದು.

ಪೂರ್ವ ದಿಕ್ಕಿನಲ್ಲಿ ಏನಿರಬೇಕು:
ಪೂರ್ವಕ್ಕೆ ಇಂದ್ರ ಅಥವಾ ದೇವೇಂದ್ರ ಅಧಿಪತಿ, ಸೂರ್ಯದೇವ ಈ ವಿಭಾಗವನ್ನು ಆಳ್ವಿಕೆ ಮಾಡುತ್ತಾನೆ. ಜಲ ಮತ್ತು ಅಗ್ನಿ ತತ್ವ ಈ ಭಾಗದಲ್ಲಿ ಇರುತ್ತದೆ. ಪರಿಶುದ್ಧ, ಪವಿತ್ರತೆ, ಆರೋಗ್ಯ, ಬೆಳವಣಿಗೆ, ನಾಯಕತ್ವ, ಗುರುತಿಸುವಿಕೆ, ಆಡಳಿತ, ರಾಜ ಪ್ರಭುತ್ವ ( ಆಳ್ವಿಕೆ ಅಧಿಕಾರ) ಕೊಡುತ್ತದೆ. ಈ ಭಾಗದಲ್ಲಿ ಓದುವ ಕೋಣೆ, ಡೈನಿಂಗ್ ಕೊಠಡಿ, ಬಾತ್ ರೂಮ್, ಎಣ್ಣೆ ಮತ್ತು ತುಬ್ಬ ಇಡುವ ಉಗ್ರಾಣವನ್ನು ಕಟ್ಟುವುದು ತುಂಬಾ ಸೂಕ್ತವಾದುದು ಎಂದ ವೇದಿಕ್ ವಾಸ್ತು ಹೇಳುತ್ತದೆ.

ಆಗ್ನೇಯ ದಿಕ್ಕಿನಲ್ಲಿ ಏನು ಕಟ್ಟಬೇಕು?
ಅಗ್ನೇಯ ದಿಕ್ಕಿನಲ್ಲಿನಲ್ಲಿ ಅಗ್ನಿ ದೇವ ಇರುತ್ತಾನೆ. ಶುಕ್ರಗ್ರಹ ಪ್ರಭಾವ ಬೀರುವ ಗ್ರಹ. ಇಲ್ಲಿ ಅಗ್ನಿ ತತ್ವ ಪ್ರಭಾವ ಬೀರುತ್ತದೆ. ಇಲ್ಲಿ ಪರಿವರ್ತನೆ, ಆಹಾರ, ಜೀರ್ಣ ಶಕ್ತಿ, ಜೀವನದಲ್ಲಿ ಏಳಿಗೆಯಾಗಲು ಈ ಏರಿಯಾ ಕಾರಣ ಎನ್ನುತ್ತಾರೆ. ಈ ದಿಕ್ಕಿನಲ್ಲಿ ಸರಿಯಾಗಿದ್ದನ್ನು ನಿರ್ಮಾಣ ಮಾಡಿದರೆ, ದೈಹಿಕ ಸಂವೃದ್ಧತೆ ಚೆನ್ನಾಗಿರುತ್ತದೆ. ಇಲ್ಲಿ ಅಡುಗೆ ಮನೆ, ಗ್ಯಾರೇಜ್, ಜನರೇಟರ್, ಎಲೆಕ್ಟ್ರಿಕಲ್ ಉಪಕರಣ ಇಟ್ಟರೆ ಒಳ್ಳೆಯದು.

ದಕ್ಷಿಣ ದಿಕ್ಕಿನಲ್ಲಿ ಏನಿದ್ದರೆ ಒಳ್ಳೆಯದು ?
ದಕ್ಷಿಣ ದಿಕ್ಕಿನ ಅಧಿಪತಿ ಯಮದೇವ, ಮಂಗಳ ಗ್ರಹ ಪ್ರಭಾವ ಬೀರುವ ಗ್ರಹ. ಅಗ್ನಿ ಮತ್ತು ಭೂ ತತ್ವ ಇಲ್ಲಿ ಕಾರ್ಯ ನಿರ್ವಹಿಸುತ್ತದೆ. ಶಕ್ತಿ, ಚಟುವಟಿಕೆ ಇದ್ದರೆ ತುಂಬಾ ಒಳ್ಳೆಯದಾಗುತ್ತದೆ. ಸಾವಿನ ಮೋಕ್ಷ ಸಿಗುವ ಜಾಗವೂ ಹೌದು. ಇಲ್ಲಿ ಬೆಡ್ ರೂಮ್ ಅಥವಾ ಸ್ಟೋರ್ ರೂಮ್ ನಿರ್ಮಾಣ ಮಾಡುವುದು ಸೂಕ್ತ ಎನ್ನುತ್ತದೆ ವಾಸ್ತು ಶಾಸ್ತ್ರ.

ನೈರುತ್ಯ ದಿಕ್ಕಿನಲ್ಲಿ ಏನು ಕಟ್ಟಬೇಕು?:
ನೈರುತ್ಯ ದಿಕ್ಕನ್ನು ನೈರುತಿ ದೇವ ಆಳ್ವಿಕೆ ಮಾಡುತ್ತಾರೆ. ಇಲ್ಲಿ ಭೂ ತತ್ವ ಪ್ರಭಾವ ಬೀರುತ್ತದೆ. ಈ ಭಾಗ ಚೆನ್ನಾಗಿದ್ದರೆ ಮನೆಯವರು ಅತಿ ಬೇಗ ಏಳಿಗೆಯಾಗುತ್ತಾರೆ. ಮೆಟೀರಿಯಲ್ ಸಕ್ಸಸ್, ಪ್ರಾಣಿಗಳ ನಡವಳಿಕೆ, ಭೂತದ ಗುಣ ಇರುತ್ತದೆ. ಈ ಭಾಗದಲ್ಲಿ ಮಾಸ್ಟರ್ ಬೆಡ್ ರೂಮ್, ಸ್ಟೋರ್ ರೂಮ್, ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಡಬಹುದು.

ಪಶ್ಚಿಮ ದಿಕ್ಕಿನಲ್ಲಿ ಏನು ಇಡಬೇಕು:
ಪಶ್ಚಿಮ ದಿಕ್ಕಿಗೆ ವರುಣ ದೇವ ಅಧಿಪತಿ. ಶನಿಗ್ರಹ ಪ್ರಭಾವ ಬೀರುವ ಗ್ರಹ. ಭೂ ತತ್ವ ಮತ್ತು ಗಾಳಿ ತತ್ವ ಪ್ರಭಾವ ಬೀರುತ್ತದೆ. ವಿಶ್ರಾಂತಿಗ ಅತಿ ಸೂಕ್ತವಾದ ಜಾಗ. ಆತ್ಮಾವಲೋಕನ, ಕಾರ್ಮಿಕ ಸಿದ್ಧಾಂತ, ಆಯಸ್ಸು ವೃದ್ಧಿಯಾಗುತ್ತದೆ. ಬೆಡ್ ರೂಮ್, ಸ್ಟೋರ್ ರೂಮ್, ಡೈನಿಂಗ್ ರೂಮ್ ಅಥವಾ ಓದುವ ಕೋಣೆ ಈ ಜಾಗದಲ್ಲಿ ಮಾಡಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ.

ವಾಯುವ್ಯ ದಿಕ್ಕು ಏನಕ್ಕೆ ಸೂಕ್ತ :
ವಾಯುವ್ಯ ದಿಕ್ಕಿಗೆ ವಾಯುದೇವ ಅಧಿಪತಿ, ಚಂದ್ರಗ್ರಹ ಪ್ರಭಾವ ಬೀಳುತ್ತದೆ. ಗಾಳಿ ತತ್ವ ಕಾರ್ಯ ನಿರ್ವಹಿಸುತ್ತದೆ. ಇ ದಿಕ್ಕು ಬದಲಾವಣೆ ಸೂಚಿಸುತ್ತದೆ. ಓಡಾಡುವಿಕೆ, ನಿರುಪಯುಕ್ತ ವಸ್ತುಗಳ ನಿರ್ವಹಣೆಗೆ ಈ ಜಾಗ ಒಳ್ಳೆಯದು. ಶೌಚಾಲಯ,ಸೆಪ್ಟಿಕ್ ಟ್ಯಾಂಕ್, ಗೆಸ್ಟ್ ರೂಮ್, ಅನಾರೋಗ್ಯಕ್ಕೆ ಒಳಗಾದವರು ಈ ಜಾಗದಲ್ಲಿ ನೆಲೆಸಿದರೆ ಒಳ್ಳೆಯದು. ಇಲ್ಲವೇ ಮದುವೆಯಾಗದೇ ಇರುವ ಹೆಣ್ಣು ಮಕ್ಕಳು ಈ ಭಾಗದಲ್ಲಿ ನೆಲೆಸಿದರೆ ಬೇಗ ಮದುವೆಯಾಗುತ್ತದೆ. ಕೆಡುವ ಹಣ್ಣು, ಬೇಗ ಮಾರಾಟವಾಗಬೇಕು ಎಂದು ತಯಾರಿಸಿದ ಕರಕುಶಲ ವಸ್ತುಗಳನ್ನು ಈ ಭಾಗದಲ್ಲಿ ಇಡಬಹುದು.

ಕುಬೇರನಾಗಲು ಉತ್ತರ ದಿಕ್ಕಿನಲ್ಲಿ ಈ ವಸ್ತು ಇಡಬೇಕು:
ಉತ್ತರ ದಿಕ್ಕಿಗೆ ಅಧಿಪತಿ ಕುಬೇರದೇವ. ಪ್ರಭಾವ ಬೀಳುವ ತತ್ವ ಬುಧಗ್ರಹ. ಗಾಳಿ ಮತ್ತು ನೀರು ತತ್ವ ಗಳು ಇಲ್ಲಿ ಕಾರ್ಯ ನಿರ್ವಹಿಸುತ್ತವೆ. ಈ ದಿಕ್ಕು ಉತ್ತಮವಾಗಿದ್ದರೆ, ಸಂಪತ್ತು, ಪ್ರಾಪಂಚಿಕ ಜ್ಞಾನ, ವಸ್ತುಗಳನ್ನು ಭೋಗಿಸುವುದನ್ನು ನಿಯಂತ್ರಿಸುತ್ತದೆ. ಇಲ್ಲಿ ಓದುವ ಕೋಣೆ ಮಾಡಿದರೆ ತುಂಬಾ ಒಳ್ಳೆಯದು. ಹಣ ಇಟ್ಟರೆ ಸಂಪತ್ತು ಹರಿದು ಬರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

Related News

spot_img

Revenue Alerts

spot_img

News

spot_img