![](https://revenuefacts.com/wp-content/uploads/2022/10/setbackhome888888888.jpg?v=1671893065)
ಬೆಂಗಳೂರು, ಡಿ. 23: ಕೆಲವೊಮ್ಮೆ ವಾಸ್ತು ಪ್ರಕಾರವೇ ಮನೆ ಇದ್ದರೂ ನೆಮ್ಮದಿ ಇರೊದಿಲ್ಲ. ಆದರೆ ವಾಸ್ತು ಪ್ರಕಾರ ಮನೆ ಇಲ್ಲದಿದ್ದರೂ ನೆಮ್ಮದಿ ಇರುತ್ತೆ. ಯಾಕೆ ಹೀಗೆಲ್ಲಾ ಆಗುತ್ತದೆ. ಹಾಗಾದರೆ, ವಾಸ್ತು ಶಾಸ್ತ್ರವನ್ನು ನಂಬಬೇಕಾ. ವಾಸ್ತು ಶಾಸ್ತ್ರ ನಿಜಕ್ಕೂ ಸರಿಯಾ ಎಂಬ ಪ್ರಶ್ನೆಗಳು ಕೆಲವರನ್ನು ಕಾಡುವುದು ಸಹಜ. ಇದಕ್ಕೆ ಕಾರಣವೂ ಇರುತ್ತದೆ. ವಾಸ್ತು ಆಗಲೀ, ಜ್ಯೋತಿಷ್ಯವನ್ನಾಗಲೀ ಜೀವನದಲ್ಲಿ ಒಮ್ಮೆಯಾದರೂ ಅನುಮಾನಿಸುತ್ತೇವೆ. ಇದಕ್ಕೆ ಕಾರಣವೇ ಹೇಳಿದ ಶಾಸ್ತ್ರದ ಪ್ರಕಾರ ಕೆಲ ಕೆಲಸಗಳು ನಡೆಯದೇ ಇರುವುದು. ಹೌದು, ಮನೆಯನ್ನು ಸಂಪೂರ್ಣವಾಗಿ ವಾಸ್ತು ಪ್ರಕಾರ ಕಟ್ಟಿರಲಾಗುತ್ತದೆ. ಆದರೆ ಆ ಮನೆಯಲ್ಲಿ ಇರುವವರಿಗೆ ನೆಮ್ಮದಿಯೇ ಇರುವುದಿಲ್ಲ.
ಇನ್ನು ಕೆಲವರು ವಾಸ್ತುವನ್ನು ನಂಬುವುದಿಲ್ಲ. ಅಂತಹವರು ತಮ್ಮಿಷ್ಟದಂತೆ ಮನೆಯನ್ನು ಕಟ್ಟಿಸಿಕೊಂಡಿರುತ್ತಾರೆ. ಆದರೆ ಆ ವ್ಯಕತಿ ಬದುಕಿನಲ್ಲಿ ತುಂಬಾನೇ ಸಂತೋಷವಾಗಿರುತ್ತಾನೆ. ಇದಕ್ಕೆಲ್ಲಾ ಏನೆಲ್ಲಾ ಕಾರಣ ಇರಬಹುದು ಎಂದು ನಿಮಗೆ ಕಾಡುತ್ತಿರಬಹುದು. ನಿಮ್ಮ ಅನುಮಾನ, ಪ್ರಶ್ನೆಗಳಿಗೆ ನಮ್ಮ ವಾಸ್ತು ಶಾಸ್ತ್ರಜ್ಞರಾದ ಡಾ.ರೇವತಿ ವೀ. ಕುಮಾರ್ ಅವರು ಸರಿಯಾದ ಕಾರಣವನ್ನು ನೀಡಿದ್ದಾರೆ. ಅದೇನು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ..
ಎಲ್ಲರೂ ವಾಸ್ತುವೇ ಸರ್ವಸ್ವ ಎಂದು ಕೊಂಡಿರುತ್ತಾರೆ. ವಾಸ್ತುವಿನಲ್ಲಿ ಸರಿ ಮಾಡಿದರೆ, ಎಲ್ಲಾ ಸಮಸ್ಯೆಯೂ ಬಗೆಹರಿಯುತ್ತೆ ಎನ್ನುತ್ತಾರೆ. ಆದರೆ ವಾಸ್ತು ಜ್ಯೋತಿಷ್ಯ ಶಾಸ್ತ್ರಕ್ಕೆ ಒಳಪಟ್ಟಿರುತ್ತದೆ ಎಂದು ಡಾ. ರೇವತಿ ವೀ ಕುಮಾರ್ ಅವರು ಹೇಳುತ್ತಾರೆ. ಮನೆ ಸಿಗಬೇಕೆಂದರೂ ಪೂರ್ವ ಕರ್ಮದ ಸಂಬಂಧ ಇರುತ್ತವೆಯಂತೆ. ನಮಗೆ ಈ ಜನ್ಮದಲ್ಲಿ ಏನು ಸಿಗಬೇಕು, ಯಾವ ಮನೆಗೆ ಹೋಗಬೇಕು, ಯಾವ ವಂಶದಲ್ಲಿ ಹುಟ್ಟಬೇಕು, ಯಾವ ಮನೆ ದೇವರನ್ನ ಪೂಜಿಸಬೇಕು, ಏನು ಕೆಲಸ ಮಾಡಬೇಕು ಎಂಬುದು ಎಲ್ಲವೂ ಕೂಡ ನಮ್ಮ ಪೂರ್ವ ಕರ್ಮದ ಫಲವಾಗಿ ಈ ಜನ್ಮದಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ.
ಪೂರ್ವ ಕರ್ಮದಿಂದಲೇ ಈ ಜನ್ಮದ ಫಲವಿರುವುದರಿಂದ ಎಲ್ಲವೂ ಪೂರ್ವ ನಿರ್ಧರಿತವಾಗಿರುತ್ತದೆ. ಪೂರ್ವ ಜನ್ಮದಲ್ಲಿ ನಾವು ಕರ್ಮದಲ್ಲಿ ಏನು ಬಾಧ್ಯತೆ ಇರುತ್ತೆ. ಆ ಪ್ರಾರ್ಬ್ಧ ಕರ್ಮ ಸರಿ ಇದ್ದರೆ, ಈ ಜನ್ಮದಲ್ಲಿ ಸಿಗುವುದೆಲ್ಲವೂ ಒಳ್ಳೆಯದಾಗಿರುತ್ತದೆ. ನಾವು ಆ ಜನ್ಮದಲ್ಲಿ ಕರ್ಮಗಳನ್ನು ಮಾಡಿದ್ದರೆ, ಈ ಜನ್ಮದಲ್ಲಿ ಕೆಟ್ಟ ಮನೆ ಸೇರುವುದು, ಕೆಟ್ಟವರ ಸಂಘ ಮಾಡುವುದು, ಸಮಸ್ಯೆಗಳನ್ನೇ ಹೊದ್ದು ಜೀವಿಸಬೇಕಾಗುತ್ತದೆ. ಆಗ ನಾವು ಏನೇ ಮಾಡಿದರೂ ಅದರಿಂದ ಒಳ್ಳೆಯ ಫಲವನ್ನು ಅಪೇಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ಬುದ್ಧಿ ಕರ್ಮಾನುಸಾರಣಿ ಎಂದು ದೊಡ್ಡವರು ಹೇಳಿದ್ದು, ಅಂದರೆ ಕರ್ಮ ನಮ್ಮ ಬುದ್ಧಿಯನ್ನ ಮಂಕು ಮಾಡುತ್ತದೆ. ಹಾಗಾಗಿ ನಾವು ಒಳ್ಳೆಯದು, ಕೆಟ್ಟದ್ದನ್ನು ನೋಡುವುದಕ್ಕೆ ಈ ಪ್ರಾರ್ಬ್ಧ ಕರ್ಮವೇ ಕಾರಣ. ನಾವು ಏನು ಮಾಡಬೇಕು ಎಂಬುದನ್ನು ಕೂಡ ಈ ಪೂರ್ವ ಜನ್ಮದ ಕರ್ಮವೇ ನಿರ್ಧರಿಸಿರುತ್ತದೆ. ಹೀಗಾಗಿ ಟೈಂ ಚೆನಾಗಿದ್ದರೂ ಅದನ್ನು ಅನುಭವಿಸಲು ಸಾಧ್ಯವಿರೋದಿಲ್ಲ. ಮನೆ ವಾಸ್ತು ಪ್ರಕಾರ ಇದ್ದರೂ ಸಮಸ್ಯೆಗಳಿರುತ್ತವೆ.
ಮೇಲ್ನೋಟಕ್ಕೆ ಎಲ್ಲರೂ ಚೆನ್ನಾಗಿದ್ದಾರೆ ಎಂಬುದನ್ನು ನಾವು ಭಾವಿಸಲಾಗದು. ಹಣಕಾಸಿನ ವಿಚಾರದಲ್ಲಿ ಚೆನ್ನಾಗಿದ್ದರೂ ನೆಮ್ಮದಿ ಇರಲ್ಲ. ಕೆಲವರಿಗೆ ಕೆಲಸವಿದ್ದರೂ ಸಂಬಳ ಬರೊಲ್ಲ. ಹಾಗಾಗಿ ಯಾರನ್ನೂ ಜಡ್ಜ್ ಮಾಡಬಾರದು. ಅವರ ಪೂರ್ವ ಕರ್ಮದ ಫಲಗಳಿಂದಾಗಿ ಈ ಜನ್ಮದಲ್ಲಿ ಕೆಲ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹಾಗಾಗಿಯೇ ವಾಸ್ತು ಸರಿಯಾಗಿದ್ದರೂ ತೊಂದರೆಗಳಾಗುತ್ತವೆ. ಏನೂ ಸರಿ ಇಲ್ಲದಿದ್ದರೂ ಕೆಲವರು ನೆಮ್ಮದಿಯಾಗಿರುತ್ತಾರೆ ಎಂದು ಡಾ.ರೇವತಿ ವೀ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.