![](https://revenuefacts.com/wp-content/uploads/2023/03/KSRTC-Bengaluru-1200-PTI_0.jpg?v=1678942597)
ಬೆಂಗಳೂರು, ಮಾ.15- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.21ರಿಂದ ರಾಜ್ಯಾದ್ಯಂತ ಮುಷ್ಕರಕ್ಕೆ ರಾಜ್ಯ ಸಾರಿಗೆ ನೌಕರರ ಸಂಘ ಕರೆ ನೀಡಿದೆ. ಇದರಿಂದಾಗಿ ಯುಗಾದಿ ಹಬ್ಬಕ್ಕೆ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟಲಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್, ಮಾ.21ರಂದು ಬೆಳಗ್ಗೆ 6ರಿಂದ 4 ನಿಗಮದ 23 ಸಾವಿರ ಬಸ್ಗಳು, 1 ಲಕ್ಷದ 25 ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ,ಯುಗಾದಿ ಮುನ್ನಾ ದಿನವೇ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆ ಹಬ್ಬಕ್ಕೆ ದೂರದ ಊರುಗಳಿಗೆ ತೆರುಳವವರಿಗೆ ತೊಂದರೆ ಉಂಟಾಗುವ ಸಾಧ್ಯತೆಗಳಿವೆ.ಮುಷ್ಕರದಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಪಾಲ್ಗೊಂಡು ರಾಜ್ಯ ಸರಕಾರ ಸಾರಿಗೆ ನೌಕರರಿಗೆ ಮಾಡುತ್ತಿರುವ ಮಲತಾಯಿ ಧೋರಣೆ ಹಾಗೂ ವಿಳಂಬ ನೀತಿಯನ್ನು ತೀವ್ರವಾಗಿ ಖಂಡಿಸಬೇಕು ಎಂದರು. ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ನೌಕರರ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ಕೊಟ್ಟು ತಿಂಗಳುಗಳೇ ಕಳೆದಿವೆ. ಆದರೆ ಈವರೆಗೆ ಯಾವುದೇ ರೀತಿಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿಲ್ಲ. ಇನ್ನೊಂದು ತಿಂಗಳು ಕಳೆದರೆ ಸರಕಾರದ ಅವಧಿಯೂ ಪೂರ್ಣಗೊಳ್ಳುತ್ತದೆ. ಮುಂದಿನ ಮಂಗಳವಾರ ಮುಷ್ಕರ ನಡೆಯಲಿದೆ.
1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು 23 ಸಾವಿರ ಬಸ್ಗಳು ಸ್ಥಗಿತಗೊಳ್ಳಲಿವೆ. ಯಾವುದೇ ಕಾರಣಕ್ಕೂ ಡಿಪೋದಿಂದ ಬಸ್ಗಳನ್ನು ತೆಗೆಯಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.ಸಾರಿಗೆ ನೌಕರರು ಸಂಕಷ್ಟದಲ್ಲಿದ್ದು, ಕೂಡಲೇ ಸರಕಾರವು ನೌಕರರ ವೇತನ ಹೆಚ್ಚಳ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಇದಕ್ಕಾಗಿ ನೌಕರರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಒಕ್ಕೊರಲಿನಿಂದ ಒತ್ತಾಯಿಸಬೇಕು ಎಂದು ಅನಂತಸುಬ್ಬರಾವ್ ತಿಳಿಸಿದರು.ಸಾರಿಗೆ ಸಚಿವ ಶ್ರೀರಾಮುಲು ಅವರು ಮಾರ್ಚ್ 8ರಂದು ಸಭೆ ಕರೆಯಲ್ಲಿ ಮೂಲ ವೇತನದ ಶೇ 10ರಷ್ಟು ಸಂಬಳ ಹೆಚ್ಚಳ ಮಾಡುವ ಪ್ರಸ್ತಾಪಕ್ಕೆ ನಾವು ಒಪ್ಪಿಕೊಂಡಿಲ್ಲ. ಆಗ ಎರಡು ದಿನಗಳೊಳಗೆ ಮತ್ತೊಮ್ಮೆ ಸಭೆ ನಡೆಸಿ ಅಲ್ಲಿ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, ಈವರೆಗೆ ಸಭೆ ಕರೆದಿಲ್ಲ ಎಂದರು.
ನೌಕರರ ಬೇಡಿಕೆಗಳೇನು?
1.ಮೂಲ ವೇತನ ಶೇ.25ರಷ್ಟು ಸಂಬಳ ಹೆಚ್ಚಿಸಬೇಕು.
2.ವೇತನ ಹೆಚ್ಚಳ ಪರಿಷ್ಕೃತ ಮೂಲ ವೇತನದ ಶೇ.3ರಷ್ಟಿರಬೇಕು.
3.ಬಾಟಾ/ಭತ್ಯೆಯನ್ನು 5 ಪಟ್ಟು ಹೆಚ್ಚಿಸಲು ಆಗ್ರಹ
4.ಆಯ್ಕೆ ಶ್ರೇಣಿಯ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಗಳಿಗೊಮ್ಮೆ ನೀಡಬೇಕು.
5.ವಜಾಗೊಂಡ ಸಿಬ್ಬಂದಿಯನ್ನು ಮರುನೇಮಕ ಮಾಡಬೇಕು,ಸಿಬ್ಬಂದಿ ಮೇಲೆ ದಾಖಲಾಗಿರುವ ಕೇಸ್ಗಳನ್ನ ರದ್ದು ಮಾಡಬೇಕು.
6.ಎಲ್ಲಾ ನಿರ್ವಾಹಕರಿಗೂ ಕ್ಯಾಪಿಯರ್ಗಳಿಗೆ ಸಮಾನದ ಪ್ರೋತ್ಸಾಹ ಧನ ನೀಡಬೇಕು.
7.2021ರ ಮುಷ್ಕರದ ವೇಳೆ ಅಮಾನತುಗೊಂಡಿರುವ ಸಿಬ್ಬಂದಿಯನ್ನು ಯಾವುದೇ ಷರತ್ತುಗಳಿಲ್ಲದೇ ಮರು ನೇಮಕ ಮಾಡಿಕೊಳ್ಳಬೇಕು.
8..ವರ್ಗಾವಣೆ ಶಿಕ್ಷೆಗೆ ಒಳಗಾಗಿರುವ ಸಿಬ್ಬಂದಿಯನ್ನ ಮೂಲ ಘಟಕಕ್ಕೆ ನಿಯೋಜಿಸಬೇಕು.
9.ಆಯ್ಕೆ ಶ್ರೇಣಿ ಬಡ್ತಿ ಮತ್ತು ಉನ್ನತ ಶ್ರೇಣಿಗಳ ವೇತನ ಶ್ರೇಣಿಯು ಸಹ ಪರಿಷ್ಕೃತ ಮೂಲ ವೇತನದ ಶೇ.3ರಷ್ಟಿರಬೇಕು.
10.ಕೈಗಾರಿಕಾ ವಿವಾದ ಕಾಯಿದೆ 1947ರ ಅನ್ವಯ ಜಂಟಿ ಕ್ರಿಯಾ ಸಮಿತಿಯ ಜೊತೆ ಕೈಗಾರಿಕಾ ಒಪ್ಪಂದ ಮಾಡಬೇಕು. ಇದು 2020ರ ಜನವರಿ 1 ರಿಂದ 2023ರ ಡಿಸೆಂಬರ್ 31ರವರೆಗೆ ಜಾರಿಯಲ್ಲಿರಬೇಕು ಎಂಬ ಬೇಡಿಕೆಗಳನ್ನು ಇಡಲಾಗಿದೆ.