ಮಾರ್ಚ್ 10 ರಿಂದ ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಸಿದ್ಧ

0
135

ಬೆಂಗಳೂರು:ಮಾರ್ಚ್ 10 ರಿಂದ ಒತ್ತುವರಿ ತೆರವಿಗೆ ಬಿಬಿಎಂಪಿ ಸಜ್ಜಾಗಿದೆ. ಮಹದೇವಪುರ ವಲಯದಲ್ಲಿ 146 ಕಡೆ ಒತ್ತುವರಿ ಮಾರ್ಕಿಂಗ್ ಆಗಿದ್ದರೂ, ಇನ್ನೂ ತೆರವಾಗಿಲ್ಲ.ರಾಜಧಾನಿ ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ಮಾಡಲು ಜೆಸಿಬಿ ಮತ್ತೆ ಘರ್ಜಿಸಲಿದೆ. ಒತ್ತುವರಿ ತೆರವು ರಿಪೋರ್ಟ್ ನೀಡಲು ತಹಶಿಲ್ದಾರಗಳು ನಿರಾಕರಣೆ ಮಾಡಿದ್ದು, ತಹಶಿಲ್ದಾರ್ ನಡೆ ಬಗ್ಗೆ ಬಿಬಿಎಂಪಿ SWD ವಿಭಾಗದ ಅಧಿಕಾರಿಗಳು ಗರಂ ಆಗಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳು 485 ಪ್ರಕರಣಗಳಲ್ಲಿ ಒತ್ತುವರಿಯಾಗಿವೆ. ಅವುಗಳ ತೆರವಿನ ಆದೇಶ ಹೊರಡಿಸಲು ತಹಶೀಲ್ದಾರ್‌ ಅವರಿಗೆ ಫೆ.15 ಕೊನೆಯ ದಿನ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಜನವರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಅವರ ಸಭೆಯಲ್ಲಿ ಹೇಳಿದ್ದರು. ಆದರೆ ಈ ಗಡುವು ಮುಗಿದರೂ ಯಾವ ಆದೇಶವೂ ಹೊರಬಂದಿಲ್ಲ. ಇಂತಹ ಸಭೆಯಾದ ಒಂದೆರಡು ದಿನ ಒಂದೆರಡು ಕಡೆ ಸಣ್ಣಮಟ್ಟದಲ್ಲಿ ತೆರವು ಮಾಡಲಾಗುತ್ತದೆ. ನಂತರ ಎಲ್ಲವೂ ಪ್ರಶಾಂತವಾಗುತ್ತದೆ.

2022ರಲ್ಲಿ ನಗರ ಅತಿಹೆಚ್ಚು ಅಂದರೆ 195.8 ಸೆಂ.ಮೀ ಮಳೆ ಕಂಡಿದ್ದು, ಇಂತಹ ಮಳೆಯಲ್ಲಿ ಪರಿಸ್ಥಿತಿಯನ್ನು ಯಾವುದೇ ತೊಂದರೆ ಇಲ್ಲದಂತೆ ನಿಭಾಯಿಸಲು ಸರ್ಕಾರ ಹಾಗೂ ಬಿಬಿಎಂಪಿ ಕೆಲವು ಯೋಜನೆಗಳನ್ನು ಪ್ರಕಟಿಸಿವೆ. ರಾಜಕಾಲುವೆಗಳ ಮರುವಿನ್ಯಾಸ, ಬಾಕ್ಸ್‌ ಕಾಂಕ್ರೀಟ್‌ ಸೇರಿದಂತೆ ಕೆರೆಗಳಿಗೆ ತೂಬು ಅಳವಡಿಸಿ ನೀರು ಹರಿಯುವುದನ್ನು ನಿಯಂತ್ರಿಸಲು ಯೋಜಿಸಲಾಗಿದೆ. ಇಷ್ಟೇ ಅಲ್ಲ, ವಿಶ್ವಬ್ಯಾಂಕ್‌ನಿಂದ ₹3 ಸಾವಿರ ಕೋಟಿ ವೆಚ್ಚದಲ್ಲಿ ಹವಾಮಾನ ವೈಪರೀತ್ಯವನ್ನು ತಡೆಯಲೂ ಯೋಜಿಸಲಾಗಿದೆ.ಮಾರ್ಚ್‌ 15ರ ಒಳಗೆ ಎಲ್ಲ ರೀತಿಯ ಒತ್ತುವರಿಯನ್ನು ತೆರವು ಮಾಡಲು ಸೂಚಿಸಲಾಗಿದೆ. ಮಾರ್ಚ್‌ 10ರೊಳಗೆ ತೆರವಿನ ನೋಟಿಸ್‌ ಜಾರಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರು ತಿಳಿಸಿದರು.ವಲಯ ಆಯುಕ್ತರಿಗೆ ತಮ್ಮ ವ್ಯಾಪ್ತಿಯಲ್ಲಿರುವ ಒತ್ತುವರಿಯನ್ನು ಗುರುತಿಸಲು ಸೂಚಿಸಲಾಗಿದೆ. ಯಾವ ಒತ್ತುವರಿ ತೆರವಿನಿಂದ ಪ್ರಯೋಜನ ಇಲ್ಲ ಎಂಬುದನ್ನು ಜಂಟಿ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಆದೇಶಿಸಲಾಗಿದೆ.

ದಾಸರಹಳ್ಳಿ 124, ಪೂರ್ವ ವಲಯದಲ್ಲಿ 88, ಯಲಹಂಕದಲ್ಲಿ 79, RR ನಗರದಲ್ಲಿ 33, ಬೊಮ್ಮನಹಳ್ಳಿ ವಲಯದಲ್ಲಿ 8, ಪಶ್ಚಿಮ ವಲಯದಲ್ಲಿ 4, ದಕ್ಷಿಣ ವಲಯದಲ್ಲಿ 3 ಕಡೆ ಒತ್ತುವರಿ ಕಾರ್ಯಾಚರಣೆ ಬಾಕಿ ಇದ್ದು, ಇದೀಗ ಒಟ್ಟು 485 ಕಡೆ ಒತ್ತುವರಿ ತೆರವಿಗೆ ಪಾಲಿಕೆ ಸಜ್ಜಾಗಿದೆ. ಆದರೆ ಒತ್ತುವರಿ ತೆರವಿಗೆ ಕಂದಾಯ ಅಧಿಕಾರಿಗಳು, ಸಹಕಾರ ನೀಡದ ಕಾರಣ ಬಿಬಿಎಂಪಿ ಬೇಸರ ಹೊರ ಹಾಕಿದೆ. ಹೀಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಸಾತ್ ಕೊಡ್ತಿದ್ದಂಗೆ ಕಾರ್ಯಾಚರಣೆ ಆರಂಭವಾಗಲಿದೆ.