![](https://revenuefacts.com/wp-content/uploads/2023/05/1-15.jpg?v=1685338782)
ಬೆಂಗಳೂರು: ಮೇ-29:ಆನೇಕ ತಿರುವುಗಳು, ವಿರೋಧಗಳ ನಡೆವೆಯು ಮುಖ್ಯಮಂತ್ರಿ ಸಿದ್ದರಾಮಯ್ಯನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ, ಸೇರಿ ಒಟ್ಟು 34 ಜನರ ಸಂಪುಟ ರಚನೆಯಾಗಿದೆ. ಸಾಮಾಜಿಕ ನ್ಯಾಯ. ಜಾತಿ ಹಾಗೂ ಪ್ರಾದೇಶಿಕ ಸಮಾನತೆಗೆ ಒತ್ತು ನೀಡಿ ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿಯನ್ನು ಫೈನಲ್ ಮಾಡಿದೆ. ಹಳಬರು ಹಾಗೂ ಹೊಸಬರನ್ನು ಒಳಗೊಂಡು ಸಿದ್ದರಾಮಯ್ಯನವರ ಸಂಪುಟ ಫುಲ್ ಫಿಲ್ ಆಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ವಂಚಿತ ಶಾಸಕರ ಕಣ್ಣು ಪ್ರಮುಖ ನಿಗಮ ಹಾಗೂ ಮಂಡಳಿಗಳ ಮೇಲೆ ಬಿದ್ದಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bangalore Development Authority) ಅಧ್ಯಕ್ಷ ಹುದ್ದೆಗೆ ಪೈಪೋಟಿ ಶುರುವಾಗಿದ್ದು, ಕಾಂಗ್ರೆಸ್ ಈಗ ಮತ್ತೊಂದು ಹಿಕ್ಕಟ್ಟನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.
ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಕೆಲ ಹಿರಿಯ ಮತ್ತು ಪ್ರಭಾವಿ ಶಾಸಕರು ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಟಿಬಿ ಜಯಚಂದ್ರ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಜಯಚಂದ್ರ, ಬಿಡಿಎ ಚೇರ್ಮನ್ ಹುದ್ದೆ ನಿಡುವಂತೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಬಿಡಿಎ ನೀಡದಿದ್ದರೆ ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿಯಾದರೂ ಮಾಡಿ ಎಂದು ಟಿ.ಬಿ ಜಯಚಂದ್ರ ಮನವಿ ಮಾಡಿದ್ದಾರೆ. ಆದ್ರೆ, ಇತ್ತ ಸಿದ್ದರಾಮಯ್ಯನವರ ಆಪ್ತ ಶಾಸಕ ಬಸವರಾಜ ರಾಯರೆಡ್ಡಿ, ದೆಹಲಿ ವಿಶೇಷ ಪ್ರತಿನಿಧಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಜಯಚಂದ್ರ ಜೊತೆಗೆ ಬೆಂಗಳೂರಿನ ವಿಜಯನಗರ ಶಾಸಕ ಪ್ರಿಯಾಕೃಷ್ಣ ಹಾಗೂ ಶಾಂತಿನಗರ ಕ್ಷೇತ್ರದ ಶಾಸಕ ಎನ್ಎ ಹ್ಯಾರಿಸ್ ಸಹ ಬಿಡಿಎ ಚೇರ್ಮನ್ ಬೇಕೆಂದು ಪಟ್ಟು ಹಿಡಿದಿದ್ದಾರೆ. ಬಿಡಿಎ ಚೇರ್ಮನ್ ಹುದ್ದೆಯನ್ನು ಸ್ಥಳೀಯ ಶಾಸಕರಿಗೇ ನೀಡಿ ಎಂದು ಬೆಂಗಳೂರು ಶಾಸಕರು ಡಿಕೆಶಿವಕುಮಾರ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸದ್ಯಕ್ಕೆ ಮೂರ್ನಾಲ್ಕು ಶಾಸಕರು ರೇಸ್ನಲ್ಲಿ ಇದ್ದಾರೆ. ದಿನ ಕಳೆದಂತೆ ಯಾವೆಲ್ಲ ಶಾಸಕರು ತಮಗೂ ಬಿಡಿಎ ಬೇಕೆಂದು ಮುಂದೆ ಬರುತ್ತಾರೋ ಗೊತ್ತಿಲ್ಲ.
ಎಲ್ಲಾ ಸಂಪುಟ ಪೂರ್ಣ ಪ್ರಮಾಣವಾಗಿ ಸರ್ಕಾರ ಇನ್ನೇನು ಟೇಕ್ ಆಫ್ ಆಗಬೇಕೆನ್ನುವಷ್ಟರಲ್ಲೇ ಇದೀಗ ನಿಗಮ ಮಂಡಳಿ ನೇಮಕ ಕಾಂಗ್ರೆಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾರ್ಯಕರ್ತರಿಗೆ ನಿಗಮ ಮಂಡಗಳಿಗಳನ್ನು ನಿಡಬೇಕೋ ಅಥವಾ ಶಾಸಕರಿಗೆ ನೀಡಬೇಕೋ ಎಂದು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ. ಇನ್ನು ಪ್ರಬಲ ನಿಗಮ ಮಂಡಳಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಮ್ಮ ಆಪ್ತರಿಗೆ ಕೊಡಿಸಲು ಮತ್ತೊಂದು ಪೈಪೋಟಿಗಿಳಿದರೂ ಅಚ್ಚರಿ ಪಡಬೇಕಿಲ್ಲ. ಹೀಗಾಗಿ ಕಾಂಗ್ರೆಸ್ಗೆ ಈಗ ಮತ್ತೊಂದು ಒಳಬೇಗುದಿ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಅಂತಿಮವಾಗಿ ಬಿಡಿಎ ಚೇರ್ಮನ್ ಯಾರ ಪಾಲಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.