22.9 C
Bengaluru
Friday, July 5, 2024

ಕರ್ನಾಟಕದಲ್ಲಿ ಬಡವರೂ ಸುಲಭವಾಗಿ ನಿವೇಶನ ಖರೀದಿಗೆ ನಿಯಮ ಸರಳೀಕರಣಗೊಳಿಸಲಿರುವ ಸರ್ಕಾರ

ಬೆಂಗಳೂರು, ಫೆ. 03 : ಬಡವರಿಗೆ ನಿವೇಶನ ಖರೀದಿಸಿ ಮನೆ ನಿರ್ಮಿಸುವುದು ಕನಸಿನ ಮಾತೇ. ಆದರೆ, ಬಡವರೂ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗಲಿ ಎಂದು ಕರ್ನಾಟಕ ಸರ್ಕಾರ ನಿಯಮಗಳನ್ನು ಸರಳೀಕರಿಸಲು ಮುಂದಾಗಿದೆ. ಈ ಬಗ್ಗೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಹೇಳಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಯಲಹಂಕದಲ್ಲಿ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ಅವರು ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ಭವಿಷ್ಯದಲ್ಲಿ ಮನೆ ನಿರ್ಮಿಸುವುದು ಹೆಚ್ಚು ಕಷ್ಟಕರವಾಗಲಿದೆ ಎಂದು ಹೇಳಿದರು.

ಕಂದಾಯ ಕಾಯ್ದೆಯಲ್ಲಿ ಮನೆ ಕಟ್ಟಲು ನಿರ್ದಿಷ್ಟ ರಿಯಾಯಿತಿ ನೀಡಿಲ್ಲ.‌ ಬೇಡಿಕೆ ಹೆಚ್ಚಾದ್ದರಿಂದಾಗಿ ನಿವೇಶನದ ಬೆಲೆಯೂ ಕೂಡ ಹೆಚ್ಚಾಗಿದೆ. ಪ್ರಸ್ತುತ ನಿಯಮಗಳ ಪ್ರಕಾರ, ಸಾಮಾನ್ಯ ಜನರು ಸೈಟ್‌ಗಳನ್ನು ಖರೀದಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಸಿಎಂ ಕಾರ್ಯಕ್ರಮದಲ್ಲಿ ಹೇಳಿದರು. ಹಾಗಾಗಿ ಬೆವರಿಗೆ ಅನುಕೂಲವಾಗುವಂತೆ ಮನೆಗಳನ್ನು ನಿರ್ಮಿಸಲು ಸಹಾಯ ಮಾಡಲು ಅಸ್ತಿತ್ವದಲ್ಲಿರುವ ನಿಯಮಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಪ್ರಸ್ತಾಪಿಸುತ್ತದೆ ಎಂದು ಸಿಎಂ ಹೇಳಿದರು.

ಮಾತು ಮುಂದುವರಿಸಿದ ಸಿಎಂ, ಸರ್ಕಾರ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಭೂಮಿ ಲಭ್ಯವಾಗುವಂತೆ ಮಾಡುತ್ತದೆ. ವಸತಿ ಉದ್ದೇಶಗಳಿಗಾಗಿ ಮತ್ತು ಮನೆಗಳ ನಿರ್ಮಾಣಕ್ಕಾಗಿ ಭೂಮಿ ಖರೀದಿಯನ್ನು ಸಹ ಸರಳಗೊಳಿಸಲಾಗುವುದು. 2019ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 10 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಅದರಲ್ಲಿ ಐದು ಲಕ್ಷ ಮನೆಗಳು ಅಂತಿಮ ಹಂತದಲ್ಲಿವೆ ಎಂದು ಬೊಮ್ಮಾಯಿ ಹೇಳಿದರು.‌ ಹಾಗೇನಾದರೂ ಆದಲ್ಲಿ ರಾಜ್ಯದಲ್ಲಿ ಬಡವರು ಕೂಡ ಹೊಸ ನಿವೇಶನ ಖರೀದಿಯ ಬಗ್ಗೆ ಕನಸು ಕಾಣಬಹುದು.

Related News

spot_img

Revenue Alerts

spot_img

News

spot_img