ಭೂ ಅತಿಕ್ರಮಣ ಕಾಯ್ದೆ ಮರೆತರೆ..? ಒತ್ತುವರಿ ತೆರವುಗೊಳಿಸಿದರೂ ಇಲ್ಲ ಪ್ರಯೋಜನ

0
139

ಬೆಂಗಳೂರು, ಜು. 01 : ಬಾಣಸವಾಡಿ ಕೆರೆ ಪ್ರದೇಶ ಮತ್ತೆ ಮತ್ತೆ ಒತ್ತುವರಿ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ. ಸರ್ವೆ.ನಂ. 211ರ 42 ಎಕರೆ 38 ಗುಂಟೆ ಕೆರೆ ಅಂಗಳವು ಮತ್ತೆ ಮತ್ತೆ ಒತ್ತುವರಿಯಾಗುತ್ತಿದೆ. 2015 ಒತ್ತುವರಿ ತೆರವುಗೊಳಿಸಿದ್ದರೂ ಮತ್ತೆ ಆಕ್ರಮಿಸಿಕೊಂಡ ಹಿನ್ನೆಲೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಪುನಃ ತೆರವು ಕಾರ್ಯಾಚರಣೆ ಮೂರು ದಿನಗಳ ಕಾಲ ನಡೆದಿತ್ತು. ಆದರೆ, ಇದೀಗ ಮತ್ತೆ ಒತ್ತುವರಿಯಾಗಿದೆ. ಕಟ್ಟಡಗಳ ನಿರ್ಮಾಣ ಕಾರ್ಯವೂ ನಡೆಯುತ್ತಿದೆ.

ಇದು ಸರ್ಕಾರದ ಪ್ರದೇಶವಾಗಿದ್ದು, ಯಾರೂ ಅತಿಕ್ರಮ ಮಾಡಿಕೊಳ್ಳಬಾರದೆಂದು ಸೂಚನಾ ಫಲಕವನ್ನು ಹಾಕಿದ್ದರೂ ಕೂಡ ಕೆರೆ ಅಂಗಳ ಒತ್ತುವರಿಯಾಗಿದೆ. ಈ ಕೆರೆಯಲ್ಲಿ ದೇವಸ್ಥಾನಕ್ಕೆಂದು 6.12 ಗುಂಟೆ, ಪೆಟ್ರೋಲ್ ಬಂಕ್ ಹಾಗೂ ಕಟ್ಟಡಕ್ಕಾಗಿ 1 ಎಕರೆ 28.9 ಗುಂಟೆ, ಬಿಡಿಎ ನಿವೇಶನ 12 ಎಕರೆ 33 ಗುಂಟೆ, ರಸ್ತೆ ನಿರ್ಮಾಣಕ್ಕೆ 7 ಎಕರೆ 31 ಗುಂಟೆ ಹಾಗೂ ಚರಂಡಿಗಾಗಿ 24.08 ಗುಂಟೆ ಸೇರಿದಂತೆ ಇತರೆ ಬಳಕೆಗೆ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ.

ಇನ್ನು ಬಿಡಿಎ ಕೂಡ ಸರ್ಕಾರಕ್ಕೆ ಬಾಣಸವಾಡಿ ಕೆರೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಸಂಪೂರ್ಣವಾಗಿ ಒತ್ತುವರಿ ತೆರವು ಮಾಡಿಕೊಟ್ಟಲ್ಲಿ ನಾವು ಅಭಿವೃದ್ಧಿಪಡಿಸುತ್ತೇವೆ ಎಂದು ತಿಳಿಸಿದೆ. ಒತ್ತುವರಿ ತೆರವುಗೊಳಿಸಿರುವ ಜಾಗದಲ್ಲಿ ಮತ್ತೆ ಮತ್ತೆ ಭೂಕಬಳಿಸುತ್ತಿರುವ ಬಗ್ಗೆ ಈಗಾಗಲೇ ತಹಶೀಲ್ದಾರ್ ಗೆ ಬಿಡಿಎ ಹಾಗೂ ಬಿಬಿಎಂಪಿ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯರು ಕೂಡ ತಹಶೀಲ್ದಾರ್ ರವಿ ಅವರಿಗೆ ದೂರು ಸಲ್ಲಿಸಿದ್ದಾರೆ.

ಇನ್ನು ತಹಶೀಲ್ದಾರ್ ರವಿ ಅವರು ಹಾಗೇನಾದರೂ ಒತ್ತುವರಿ ಆಗಿರುವುದು ನಿಜವೇ ಆಗಿದ್ದರೆ, ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಒಮ್ಮೆ ಒತ್ತುವರಿಯಾದ ಜಾಗದಲ್ಲಿ ತೆರವುಗೊಳಿಸಿ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಆ ಜಾಗ ಮತ್ತೆ ಮತ್ತೆ ಒತ್ತುವರಿಯಾಗುತ್ತದೆ ಎಂಬುದಕ್ಕೆ ಈಗ ಬಾಣಸವಾಡಿ ಗ್ರಾಮದ ಕೆರೆಯೇ ನಿದರ್ಶನವಾಗಿದೆ.