28.2 C
Bengaluru
Wednesday, July 3, 2024

ಗ್ಯಾರಂಟಿ ಯೋಜನೆಗಳಿಂದ ಪ್ರತಿ ತಿಂಗಳು ಮಹಿಳೆಯರು ಉಳಿಸುವ/ ಗಳಿಸುವ ಹಣವೆಷ್ಟು ಗೊತ್ತಾ? ಕನಿಷ್ಠ 4,000 ರೂ, ಗರಿಷ್ಠ 9,000 ರೂ!

ಬೆಂಗಳೂರು ಜೂನ್ 03:Guarantee Schemes Will Bring 4000 to 9000 Rupees To Women : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಎಲ್ಲಾ ಗ್ಯಾರಂಟಿ ಯೋಜನೆಗಳು ಮಹಿಳಾ ಕೇಂದ್ರೀತವಾಗಿವೆ. ಈ ಯೋಜನೆಗಳ ಮೊದಲ ಹಾಗೂ ಅಂತಿಮ ಫಲನಾನುಭವಿಗಳು ಮಹಿಳೆಯರೇ ಆಗಿದ್ದಾರೆ. ಈ ಎಲ್ಲಾ ಯೋಜನೆಗಳ ಮೂಲಕ ಮಹಿಳೆಯರು ಕನಿಷ್ಠ 4 ಸಾವಿರ ರೂಪಾಯಿಯಿಂದ ಗರಿಷ್ಠ 9 ಸಾವಿರ ರೂಪಾಯಿ ಹಣ ಗಳಿಕೆ/ ಉಳಿಕೆ ಮಾಡಬಹುದು. ಹೇಗೆ ಗೊತ್ತಾ? ಇಲ್ಲಿದೆ ವಿವರ.

ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಈ ಗ್ಯಾರಂಟಿ ಯೋಜನೆಗಳಿಂದ ಮನೆ ನಡೆಸುವ ಗೃಹಿಣಿ ಅಥವಾ ಮಹಿಳೆಗೆ ಸಾವಿರಾರು ರೂಪಾಯಿ ಉಳಿಯಲಿದೆ! ಮಾತ್ರವಲ್ಲದೇ, ಸಹಾಯಧನಗಳಿಂದಲೂ ಸಾವಿರಾರು ರೂಪಾಯಿ ಕೈ ಸೇರಲಿದೆ.

ಹೌದು, ಕಾಂಗ್ರೆಸ್‌ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಈ ಎಲ್ಲಾ ಗ್ಯಾರಂಟಿಗಳು ಮಹಿಳಾ ಕೇಂದ್ರೀಕೃತವಾಗಿದ್ದು, ಪ್ರತಿಯೊಂದು ಯೋಜನೆಯಲ್ಲಿಯೂ ಮಹಿಳೆ ಲಾಭ ಪಡೆದುಕೊಳ್ಳಲಿದ್ದಾಳೆ. ಕನಿಷ್ಠ 4 ಸಾವಿರದಿಂದ ಗರಿಷ್ಠ 9 ಸಾವಿರ ರೂಪಾಯಿವರೆಗೂ ಮಹಿಳೆಯರಿಗೆ ಉಳಿತಾಯ/ ಗಳಿಕೆಯಾಗಲಿದೆ. ಯಾವ ಯೋಜನೆಗಳಲ್ಲಿ ಮಹಿಳೆಗೆ ಎಷ್ಟು ಲಾಭ? ಎಷ್ಟು ಹಣ ಉಳಿತಾಯ? ಎಷ್ಟು ಹಣ ಸಹಾಯಧನದ ರೂಪದಲ್ಲಿ ಕೈ ಸೇರಲಿದೆ? ಇನ್ನಿತರ ವಿವರ ಇಲ್ಲಿದೆ.

500 ರಿಂದ 1000 ರೂಪಾಯಿ ಉಳಿಸುವ ಗೃಹಜ್ಯೋತಿ​​

​ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಜ್ಯೋತಿ ವಿದ್ಯುತ್‌ ಯೋಜನೆಯಿಂದ ಒಂದು ಮನೆಗೆ ಗರಿಷ್ಠ 200 ಯೂನಿಟ್‌ ವಿದ್ಯುತ್‌ ಉಚಿತ ಸೌಲಭ್ಯ ಸಿಗಲಿದೆ. ಇದರಲ್ಲಿ ಯಾವುದೇ ಆರ್ಥಿಕ ಮಿತಿ ಹಾಕದಿರುವುದರಿಂದ ಎಪಿಎಲ್‌ ಬಿಪಿಎಲ್‌ ಎಲ್ಲರಿಗೂ ಅನ್ವಯವಾಗಲಿದೆ.
ಸದ್ಯ ಮನೆ ನಿರ್ವಹಣೆ ಮಾಡುವ ಮಹಿಳೆಯರೇ ಕರೆಂಟ್‌ ಬಿಲ್‌ ಪಾವತಿಸುತ್ತಾರೆ. ಸಾಮಾನ್ಯ ಕುಟುಂಬಗಳಲ್ಲಿ ಮಾಸಿಕ 80 ರಿಂದ 100 ಯೂನಿಟ್‌ ಕರೆಂಟ್‌ ಬಳಕೆಯಾಗಿ ಬಿಲ್‌ 800 – 1000 ರೂ.ಪಾಯಿ ಬರುತ್ತದೆ. ಆ ಎಲ್ಲಾ ಹಣವೂ ಉಳಿತಾಯವಾಗಿ ಮಹಿಳೆಯರ ಸಾಸಿವೆ ಡಬ್ಬ ಸೇರಲಿದೆ.


ಒಂದು ಸಾವಿರ ರೂಪಾಯಿ ಉಳಿಸುವ ಅನ್ನಭಾಗ್ಯ ಯೋಜನೆ​​
​ಸದ್ಯ ಮಾರುಕಟ್ಟೆಯಲ್ಲಿ ಕನಿಷ್ಠ ಅಂದರೂ ಸ್ಟೀಮ್ ‌ ಅಕ್ಕಿಯ ಬೆಲೆ ಪ್ರತಿ ಕೆ.ಜಿಗೆ 50 ರೂಪಾಯಿ ಇದೆ. ಇನ್ನು ರಾರೈಸ್ ‌ ಅಕ್ಕಿ ಬೆಲೆ 70 ರಿಂದ 100 ರೂಪಾಯಿ ಇದೆ. ಮಧ್ಯಮ ವರ್ಗ ಅಥವಾ ಬಡ ವರ್ಗ ಅಕ್ಕಿಗಾಗಿ ಮಾಸಿಕ 1200 ರಿಂದ 1500 ರೂಪಾಯಿ ಖರ್ಚು ಮಾಡಬೇಕಿತ್ತು.
ಅನ್ನಭಾಗ್ಯದಲ್ಲಿ ತಲೆಗೆ 10 ಕೆಜಿಯಂತೆ ನಾಲ್ಕು ಜನ ಇರುವ ಕುಟುಂಬಕ್ಕೆ 40 ಕೆ.ಜಿ ಅಕ್ಕಿ ಸಿಗಲಿದೆ. ಈ ಮೂಲಕ ಮಾಸಿಕ ಒಂದು ಸಾವಿರಕ್ಕೂ ಅಧಿಕ ಹಣ ಉಳಿತಾಯವಾಗಲಿದೆ.


ಗೃಹ ಲಕ್ಷ್ಮಿ ಯೋಜನೆ ಮಾಹಿತಿ ಇಲ್ಲಿದೆ
ಪ್ರತಿ ತಿಂಗಳು ಖರ್ಚಿಗೆ ಸಿಗಲಿದೆ ಗೃಹಲಕ್ಷ್ಮೀ ಸಹಾಯಧನ 2,000 ರೂ.​​
​ಗೃಹಲಕ್ಷ್ಮೀ ಯೋಜನೆಯಡಿ ಮನೆಯನ್ನು ನಿಭಾಯಿಸುವ ಮನೆಯೊಡತಿಗೆ ಮಾಸಿಕ 2,000 ರೂ. ಸಹಾಯ ಧನ ಸಿಗಲಿದೆ. ಈ ಹಣವನ್ನು ಗ್ಯಾಸ್‌, ತರಕಾರಿ, ಇತರೆ ರೇಷನ್ ‌ ವೆಚ್ಚಕ್ಕೆ ಬಳಸಬಹುದು. ಅಥವಾ ಭವಿಷ್ಯಕ್ಕಾಗಿ ಬ್ಯಾಂಕ್‌ ಖಾತೆಯಲ್ಲಿಯೇ ಉಳಿಸಿಕೊಳ್ಳಬಹುದು. ಇದು ಗೃಹಿಣಿಗೆ ಗಳಿಕೆ ಎಂದೇ ಪರಿಗಣಿಸಲಾಗಿದೆ.

ಮಹಿಳೆಯರಿಗೆ ಉಚಿತ ಬಸ್‌ 2,000 ರೂಗಿಂತ ಹೆಚ್ಚು ಉಳಿತಾಯ​​
ಬೆಂಗಳೂರಿನಲ್ಲಿ ಉದ್ಯೋಗಕ್ಕೆ ತೆರಳುವ ಮಹಿಳೆಯರು ಮಾಸಿಕ ಬಿಎಂಟಿಸಿ ಬಸ್‌ ಪಾಸ್‌ಗೆ 1,200 ರೂಪಾಯಿ ನೀಡುತ್ತಾರೆ. ಇನ್ನು ಊರಿಗೆ ತೆರಳಲು ಸೇರಿದಂತೆ ಮಾಸಿಕ ಕನಿಷ್ಠ 2,000 ರೂಪಾಯಿ ಬಸ್‌ ಟಿಕೆಟ್‌ಗೆ ವೆಚ್ಚ ಮಾಡುತ್ತಾರೆ. ಗೃಹಿಣಿಯರು ಊರು, ಮಾರುಕಟ್ಟೆ ಇತರೆ ಕೆಲಸಗಳಿಗೆ ಓಡಾಟ ಎಂದು ಮಾಸಿಕ ಕನಿಷ್ಠ 1,000 ಸಾವಿರ ಹಣ ಬಸ್‌ ಟಿಕೆಟ್‌ಗೆ ವ್ಯಯಿಸುತ್ತಿದ್ದರು.

ಮಹಿಳೆಯರು ಇಬ್ಬರಿದ್ದರೆ ಅಲ್ಲಿಗೆ 2 ಸಾವಿರ ರೂಪಾಯಿ ಬೇಕಾಗುತ್ತಿತ್ತು. ಸದ್ಯ ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಮಾಡಿರುವುದರಿಂದ ಮಹಿಳೆಯರಿಗೆ 2000 ರೂಪಾಯಿ ಮಿಕ್ಕಲಿದೆ.

​​ವಿದ್ಯಾನಿಧಿ ಲಾಭ ಯುವತಿಯರಿಗೆ ಹೆಚ್ಚು!
ಯುವನಿಧಿ ಯೋಜನೆಯಡಿ ಡಿಗ್ರಿ ಮುಗಿಸಿ ಅಥವಾ ಡಿಪ್ಲೋಮೊ ಮುಗಿಸಿ ಉದ್ಯೋಗ ಸಿಗದ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ ನಿಡಲಾಗುತ್ತಿದೆ. ಇಂದಿಗೂ ಹಲವು ಮನೆಗಳಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಯುವತಿಯರು ಡಿಗ್ರಿ ಶಿಕ್ಷಣ ಮುಗಿಸಿದ ಬಳಿಕ ಮದುವೆ ಮಾಡಿಕೊಡಲಾಗುತ್ತದೆ. ಕೆಲಸಕ್ಕೆ ಕಳಿಸಲು ಹುಟ್ಟಿದ ಮನೆಯವರು ಅಥವಾ ಗಂಡನೆ ಮನೆಯವರು ಸಿದ್ಧರಿರುವುದಿಲ್ಲ. ಇಂತಹ ಯುವತಿಯರು ಮನೆಯಲ್ಲಿಯೇ ಕುಳಿತು ಎರಡು ವರ್ಷದವರೆಗೂ ತಿಂಗಳಿಗೆ ಸಾವಿರಾರು ರೂಪಾಯಿ ಪಡೆದುಕೊಳ್ಳಲಿದ್ದಾರೆ.

​ಒಬ್ಬ ಮಹಿಳೆಯು ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ವಿದ್ಯಾನಿಧಿ ಹಾಗೂ ಶಕ್ತಿ ಯೋಜನೆ ಎಲ್ಲಾ ಯೋಜನೆಗಳ ವ್ಯಾಪ್ತಿಗೆ ಬಂದರೆ ಮಾಸಿಕ 9 ಸಾವಿರ ರೂಪಾಯಿವರೆಗೂ ಹಣ ಉಳಿಕೆ/ ಗಳಿಕೆ ಮಾಡಬಹುದು. ಒಟ್ಟಾರೆ ಕರ್ನಾಟಕ ಸರ್ಕಾರದ ಈ ಎಲ್ಲಾ ಗ್ಯಾರಂಟಿ ಯೋಜನೆಗಳಿಂದ ನಾಡಿನ ಯುವತಿಯರು ಹೆಚ್ಚಿನ ಲಾಭ ಪಡೆದುಕೊಂಡು ಆರ್ಥಿಕವಾಗಿಯೂ ಹೆಚ್ಚು ಸದೃಢವಾಗಲಿದ್ದಾರೆ. ಯುವತಿಯರ ಸ್ವಾವಲಂಬನೆಯ ಬದುಕಿಗೆ ಈ ಗ್ಯಾರಂಟಿಗಳು ಸಹಕಾರ ನೀಡಲಿವೆ ಎಂದು ಸ್ತ್ರೀ ಸಂಘಟನೆಗಳ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

Related News

spot_img

Revenue Alerts

spot_img

News

spot_img