ಯಾದಗಿರಿಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ,ಮುಂದಿನ 10 ವರ್ಷಗಳಲ್ಲಿ ರಾಜ್ಯದ ನೀರಾವರಿ ಯೋಜನೆಗಳು ಪೂರ್ಣ

0
123

ಯಾದಗಿರಿ;ಮುಂದಿನ 10 ವರ್ಷಗಳನ್ನು ನೀರಾವರಿ ದಶಕವೆಂದು ಘೋಷಿಸಲಾಗುವುದು; ಇನ್ನು 10 ವರ್ಷಗಳಲ್ಲಿ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ.ಸಾಮಾನ್ಯ ಜನರ ಬದುಕು ಹಸನಾಗಿಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಕೋಡೆಕಲ್ ಹೊರವಲಯದಲ್ಲಿ ಏರ್ಪಡಿಸಿದ್ದ 10863ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿಗಳು ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ಕಾಡಾ ತಂತ್ರಜ್ಞಾನ ಅಳವಡಿಕೆಯಿಂದ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಜಮೀನಿಗೆ ನೀರು;
ನಾರಾಯಣಪುರ ಎಡದಂಡೆ ಕಾಲುವೆಯ ಯೋಜನೆ ನೀರಾವರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ. 10 ಲಕ್ಷ ಹೆಕ್ಟೇರ್ ಪ್ರದೇಶದಕ್ಕೆ ನೀರಾವರಿ ಒದಗಿಸುವ ಗುರಿಯೊಂದಿಗೆ ಮುಂದಿನ 10 ವರ್ಷ ನೀರಾವರಿ ದಶಕ ಎಂದು ಘೋಷಿಸಿ ಹೆಚ್ಚಿನ ಅನುದಾನವನ್ನು ನೀರಾವರಿಗೆ ಮೀಸಲಿರಿಸಿ,ರಾಜ್ಯದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.‘ಸ್ಕಾಡಾ ಯೋಜನೆಯಿಂದ ಇಂಡಿ, ಜೇವರ್ಗಿ, ಶಹಾಪುರ, ಮುಡಬೂಳ ಸೇರಿದಂತೆ ಎಲ್ಲ ಶಾಖಾ ಕಾಲುವೆಗಳಿಗೆ ನೀರು ತಲುಪಲಿದೆ. ಇದು ನಮ್ಮ ಸರ್ಕಾರದ ಸಾಧನೆಯಾಗಿದೆ. ಯಾರೂ ಕೂಡ ನೀರಾವರಿಯಿಂದ ವಂಚಿತರಾಗಬಾರದು ಎನ್ನುವುದು ನಮ್ಮ ಆಶಯವಾಗಿದೆ‘ ಎಂದರು.ರಾಜ್ಯದಲ್ಲಿ 40.66ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶದ ಗುರಿ ಇದ್ದು,ಇದುವರೆಗೆ 30ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಲಾಗುತ್ತಿದ್ದು,ಬಾಕಿ ಉಳಿದ 10.66ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

 

ಈ ಯೋಜನೆಯು ಇಡೀ ಏಷ್ಯಾ ಖಂಡದಲ್ಲಿಯೇ ದೊಡ್ಡ ಯೋಜನೆಯಾಗಿದೆ. ಈ ರೀತಿಯ ಯೋಜನೆಗಳನ್ನು ಇನ್ಮುಂದೆಯೂ ಕರ್ನಾಟದಲ್ಲಿ ಅನುಷ್ಠಾನಗೊಳಿಸುತ್ತೇವೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಭಗವಂತ ಖೂಬಾ, ಸಂಸದರಾದ ರಾಜಾ ಅಮರೇಶ್ವರ ನಾಯಕ್, ಶಾಸಕರಾದ ವೆಂಕಟರೆಡ್ಡಿ ಮುದ್ನಾಳ್, ಎ.ಎಸ್.ಪಾಟೀಲ್ ನಡಹಳ್ಳಿ,ರಮೇಶ ಸಿಂದಗಿ, ಸೋಮನಗೌಡ ಹಿಪ್ಪರಗಿ ಇದ್ದರು.