ಅನಧಿಕೃತ ಕಟ್ಟಡ ತೆರವು ಬಗ್ಗೆ ಹೈ ಕೋರ್ಟ್‌ ತಾಕೀತು

0
231

ಬೆಂಗಳೂರು, ಆ. 16 : ಸಿಲಿಕಾನ್‌ ಸಿಟಿಯಲ್ಲಿ ಸಾಕಷ್ಟು ಜಾಗವನ್ನು ಹಲವರು ಒತ್ತುವರಿ ಮಾಡಿಕೊಂಡು ಅನಧೀಕೃತವಾಗಿ ಮನೆ, ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಬಿಬಿಎಂಪಿಯೂ ಪದೇ ಪದೇ ಒತ್ತುವರಿ ತೆರವು ಮಾಡುತ್ತಿದ್ದರೂ ಕೂಡ ಪ್ರಯೋಜನವಿಲ್ಲ. ಕೆಲ ಅಧಿಕಾರಿಗಳು ಹೈ ಕೋರ್ಟ್‌ ಆದೇಶವನ್ನೂ ಮೀರಿ, ಕಾಟಾಚಾರಕ್ಕೆ ಒತ್ತುವರಿ ತರವು ಕಾರ್ಯ ನಡೆಸಿರುವುದು ನ್ಯಾಯಾಲಕ್ಕೆ ತಿಳಿದು ಬಂದಿದೆ. ಹೀಗಾಗಿ ನ್ಯಾಯಾಲಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ವರದಿಯನ್ನು ಕೇಳಿದೆ.

ಒತ್ತುವರಿ ಮಾಡಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಾಗ ನಾಮಕಾವಸ್ಥೆಗೆ ಮಾಡುವುದು ವ್ಯರ್ಥ. ಇನ್ನು ಮೂರೇ ವಾರಗಳಲ್ಲಿ ಅನಧಿಕೃತ ಕಟ್ಟಡಗಳ ಸಮಗ್ರ ಕ್ರಿಯಾ ಯೋಜನೆಯನ್ನು ಸಲ್ಲಿಸಿ ಎಂದು ಕರ್ನಾಟಕ ಹೈ ಕೋಟ್‌ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಹೈ ಕೋರ್ಟ್‌ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದೆ. ಈ ವೇಳೆ ಒತ್ತುವರಿ ಯೋಜನೆಯ ಬಗ್ಗೆ ಮಾಹಿತಿ ಕೇಳಿದೆ.

ಮುಂದಿನ ಮೂರು ವಾರದೊಳಗೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಎಲ್ಲಾ ಸಂಸ್ಥೆಗಳ ಸಭೆ ಸೇರಿ ಸಮಗ್ರ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು. ಜೊತೆಗೆ ಈ ಹಿಂದಿನ ಆದೇಶಗಳ ಪಾಲನೆಯ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದೆ. ಬಿಬಿಎಂಫಿ ಕಾಟಾಚಾರಕ್ಕೆ ಒತ್ತುವರಿ ತೆರವು ಕಾರ್ಯಗಳನ್ನು ಮಾಡುತ್ತಿದೆ. ಈ ಹಿಂದೆ ಕೋರ್ಟ್ ನೀಡಿದ ಆದೇಶಗಳು ನಿರ್ಲಕ್ಷ್ಯಕ್ಕೆ ಒಳಗಾಗಿರುವುದರ ಬಗ್ಗೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಕೋರ್ಟ್ ಇದರ ಬಗ್ಗೆ ಸ್ಪಷ್ಟನೆ ಕೇಳಿದೆ.