ಶಿವರಾತ್ರಿಯು ಶಿವ ಮತ್ತು ಶಕ್ತಿಯ ಸಂಗಮದ ಮಹಾ ಹಬ್ಬವಾಗಿದೆ. ಶಿವರಾತ್ರಿ ಎಂದರೆ ಹಿಂದುಗಳಿಗೆ ಆಧ್ಯಾತ್ಮಿಕ ಉತ್ಸವ. ರಾತ್ರಿಯಿಡಿ ಶಿವನನ್ನು ನೆನೆಯುತ್ತ ಆಚರಿಸುವ ಈ ಶಿವರಾತ್ರಿಯ ಮಹತ್ವ ಹೇಳುವುದೇ ಒಂದು ಸಂಭ್ರಮ.ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಅದು ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿಯೇ ಬರುತ್ತದೆ.ಒಂದೊಂದು ದೇವರ ಹಬ್ಬಕ್ಕೂ ಒಂದೊಂದು ರೀತಿಯ ವ್ರತ ನಿಯಮಗಳು ಆಚರಣೆಯಲ್ಲಿ ಬರುತ್ತವೆ. ಹಾಗೆ ಮಾಡಿದರೆ ಮಾತ್ರವೇ ಆ ಹಬ್ಬ ಹರಿದಿನಗಳು ಸಾರ್ಥಕವಾಗಿ ಸಫಲವಾಗುತ್ತವೆ.ಉಪವಾಸವಿದ್ದು ಶಿವನ ಆರಾಧನೆ ಮಾಡಿದರೆ ಶಿವ ಪೂಜೆ ಫಲ ನೀಡುವುದು ಎಂದು ಹೇಳಲಾಗುವುದು. ಶಿವರಾತ್ರಿಯಂದು ಶಿವನ ಆರಾಧನೆ ಮಾಡುವುದರಿಂದ ಮನಸ್ಸಿಗೆ-ದೇಹಕ್ಕೆ ತುಂಬಾ ಒಳ್ಳೆಯದು.ಒಂದು ಶಿವರಾತ್ರಿ ವ್ರತವನ್ನು ಆಚರಿಸಿದರೆ, ಸಾವಿರ ಏಕಾದಶಿ ವ್ರತಗಳು ಆಚರಿಸಿದಷ್ಟು ಫಲಗಳು ಹಾಗೂ ಕಾಶಿಯಲ್ಲಿ ಮುಕ್ತಿ ಪಡೆದ ಪುಣ್ಯ ಫಲಗಳು ಸಿಗುತ್ತದೆಂದು ಶಿವ ಪುರಾಣದಲ್ಲಿ ಹೇಳಲಾಗಿದೆ.
ಶಿವರಾತ್ರಿಯಂದು ಶಿವನ ಭಕ್ತರು ಈ ಮೂರು ನಿಯಮಗಳನ್ನು ಪಾಲಿಸಬೇಕು:
ಶಿವನಿಗೆ ಅಭಿಷೇಕಾದಿ ಪೂಜೆ;ಶಿವನು ಅಭಿಷೇಕಗಳ ಪ್ರಿಯ. ಅವನು ಎಂದಿಗೂ ಅಭಿಷೇಕವನ್ನು, ನೀರಿನಿಂದ ಮಾಡುವ ಪೂಜೆಯನ್ನು, ಪವಿತ್ರ ಸ್ನಾನವನ್ನು ಇಷ್ಟಪಡುತ್ತಾನೆ. ಶಿವನಿಗೆ ನೀರಿನಲ್ಲಿ ಇರುವುದೆಂದರೆ ಬಹಳ ಪ್ರೀತಿಯೆಂದು ಹೇಳಲಾಗುತ್ತದೆ. ಆದ್ದರಿಂದ ಶಿವನಿಗೆ ಅಭಿಷೇಕ ಮಾಡುವುದರಿಂದ ಆತನ ಆಶೀರ್ವಾದವನ್ನು ತುಂಬಾನೇ ಸುಲಭವಾಗಿ ಪಡೆದುಕೊಳ್ಳಬಹುದು.ಬಿಲ್ವ ಪತ್ತೆ ದಳಗಳಿಂದ ಪೂಜಿಸಿದರೆ ತುಂಬಾ ಶ್ರೇಷ್ಠ.ಶಿವಾಲಯಗಳಿಗೆ ಹೋಗಿ ಅಥವಾ ತಮ್ಮ ಮನೆಯಲ್ಲಿಯೇ ಶಿವಲಿಂಗವನ್ನು ಇಟ್ಟುಕೊಂಡು ಅದಕ್ಕೆ ಅಭಿಷೇಕ, ಅಷ್ಟೋತ್ತರ, ಸಹಸ್ರನಾಮ ಪೂಜೆಯನ್ನು ಯಥಾಶಕ್ತಿ ಮಾಡಬಹುದು. ಶಿವರಾತ್ರಿಯಂದು ಸಾಯಂಕಾಲ 6 ಗಂಟೆಯಿಂದ ಪ್ರಾರಂಭಿಸಿ ಮಾರನೆಯ ದಿವಸ ಬೆಳಿಗ್ಗೆ 6 ಗಂಟೆಯವರೆಗೂ ನಾಲ್ಕೂ ಜಾವಗಳಲ್ಲಿ ಶಿವನ ಪೂಜೆಯನ್ನು ಮಾಡಬೇಕು.
ಜಾಗರಣೆ;ಶಿವರಾತ್ರಿಯಂದು ಮುಕ್ಕಣ್ಣನನ್ನು ಪೂಜಿಸಿ ಜಾಗರಣೆ ಮಾಡುವುದಕ್ಕೂ ಅರ್ಥವಿದೆ. ಮಧ್ಯರಾತ್ರಿಯಲ್ಲಿ ಶಿವನಿಗೂ ಪಾರ್ವತಿಗೂ ಕಲ್ಯಾಣವಾಯಿತು. ಈ ವಿವಾಹಕ್ಕೆ ಮೂರು ಲೋಕಗಳು ಅಂದು ಜಾಗರಣೆ ಮಾಡಿರುತ್ತವೆ. ಈ ಕಾರಣದಿಂದ ಅಂದು ನಿದ್ರೆ ಮಾಡದೆ ಶಿವರಾತ್ರಿ ಜಾಗರಣೆ ಮಾಡಬೇಕೆಂದು ಹೇಳಲಾಗುತ್ತದೆ. ಇದಲ್ಲದೆ, ವರ್ಷಕಾಲ ನಮ್ಮನ್ನು ಕಾಯುವ ಶಿವನಿಗೆ ಒಂದು ದಿನವಾದರೂ ಆತನನ್ನು ನಾವು ಕಾಯಬೇಕು.ದೇವಾಲಯಗಳಲ್ಲಿ ಸಂಜೆ 6 ಗಂಟೆಯಿಂದ ಮೊದಲ್ಗೊಂಡು ಮುಂಜಾನೆ 6 ಗಂಟೆಯವರೆಗೆ ರುದ್ರಪಠಣದ ಮೂಲಕ ಶಿವ ಸ್ತುತಿ, ಜಾಗರಣೆ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಆಚರಣೆ ಮೂಲಕ ಜಾಗರಣೆ ಮುಕ್ತಾಯಗೊಳ್ಳುತ್ತದೆ.
ಉಪವಾಸ-ಜಾಗರಣೆ ಶಿವಧ್ಯಾನಗಳ ತ್ರಿವೇಣಿ ಸಂಗಮವೇ ಶಿವರಾತ್ರಿ..ಅಮೃತಗಾಗಿ ದಾನವರು ಹಾಗೂ ದೇವತೆಗಳು ಸಮುದ್ರ ಮಂಥನ ಮಾಡುವಾಗ ಮೊದಲಿಗೆ ಹಾಲಾಹಲ ಉಕ್ಕುತ್ತೆ, ಆಗ ದೇವತೆಗಳು ಹಾಗೂ ಅಸುರರು ಶಿವನಲ್ಲಿ ಪ್ರಾರ್ಥಿಸಿದಾಗ ಶಿವನು ಆ ವಿಷವನ್ನು ಕುಡಿಯುತ್ತಾನೆ, ಆಗ ಪಾರ್ವತಿಯು ಶಿವ ಕುಡಿದ ವಿಷ ಅವನ ದೇಹಕ್ಕೆ ಹರಡಬಾರದು ಎಂದು ಶಿವನ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಏನೂ ತಿನ್ನದೆ ಒಂದು ರಾತ್ರಿ- ಒಂದು ಹಗಲು ನಿಲ್ಲುತ್ತಾರೆ, ಆಗ ಶಿವ ನೀಲಕಂಠನಾಗುತ್ತಾನೆ ಎಂದು ಪೌರಾಣಿಕ ಕತೆ ಹೇಳುತ್ತದೆ. ಅಲ್ಲಿಂದ ಶಿವರಾತ್ರಿಗೆ ಉಪವಾಸ ಆಚರಣೆ ಮಾಡಲಾಗುವುದು ಎಂದು ಹೇಳಲಾಗುವುದು.
ಹಲವು ಶಿವಾಲಯಗಳಲ್ಲಿ 11 ಸಲ ರುದ್ರಾಭೀಷೇಕ ಮಾಡುತ್ತಾರೆ. ಉಪವಾಸ ಮಾಡುವುದು ಎಂದರೆ, ದೇವರಿಗೆ ಹತ್ತಿರವಾಗಿರುವುದು/ದೇವರ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ/ತಿಂಡಿಯ ಕಡೆ ಗಮನ ಹೋಗುವುದಿಲ್ಲ.ಉಪವಾಸವನ್ನು ಹೆಚ್ಚು ಫಲಪ್ರದವಾಗಿಸಲು “ಓಂ ನಮಃ ಶಿವಾಯ” ಮಂತ್ರವನ್ನು ಹಲವು ಬಾರಿ ಪಠಿಸಬೇಕು.
ಹಿಂದೂಗಳ ಆಚರಣೆಯಲ್ಲಿ ಶಿವರಾತ್ರಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಶಿವರಾತ್ರಿಯಂದು ಭಕ್ತಿಯಿಂದ ಶಿವನನ್ನು ಆಚರಣೆ ಮಾಡುವುದರಿಂದ ದುಃಖಗಳು ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ ಹಾಗೂ ಶಿವನ ಪ್ರೀತಿ ಪಾತ್ರರಾಗುತ್ತಾರೆಂಬು ನಂಬಿಕೆ ಇದೆ.