Sankranti 2023 |ಬೆಂಗಳೂರು, ಜ. 12: ಸಕ್ರಾಂತಿಯನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಚರಣೆ ಮಾಡುತ್ತಾರೆ. ತಮಿಳುನಾಡು- ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಕೋಲಾರ ಭಾಗದಲ್ಲಿ ಸಂಕ್ರಾಂತಿ ಹಬ್ಬವನ್ನು ಜಾನುವಾರುಗಳ ಹಬ್ಬವನ್ನಾಗಿ ಆಚರಣೆ ಮಾಡುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ವರ್ಷ ಪೂರ್ತಿ ರೈತರ ಶ್ರೇಯೋಭಿವೃದ್ಧಿಗಾಗಿ ದುಡಿಯುವ ಜಾನುವಾರುಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. ಅವುಗಳ ಸಂಭ್ರದಲ್ಲಿ ಮಜಾ ಉಡಾಯಿಸುತ್ತಾರೆ. ಅವುಗಳ ಸಂತಸದಲ್ಲಿ ತೇಲಾಡುತ್ತಾರೆ.
ತೆಲಗು ಮಿಶ್ರಿತ ಕನ್ನಡ ಮಾತನಾಡುವ ಕೋಲಾರ ಭಾಗದಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ವಿಶಿಷ್ಟವಾಗಿರುತ್ತದೆ. ಎಳ್ಳು ಬೆಲ್ಲಕ್ಕಿಂತಲೂ ಎಮ್ಮೆ, ಕುರಿ, ಹಸು, ರಾಸುಗಳ ಖುಷಿಯಲ್ಲಿ ರೈತರು ಸಂಭ್ರಮ ಆಚರಣೆ ಮಾಡುತ್ತಾರೆ. ಸಂಕ್ರಾಂತಿಯನ್ನು ಎತ್ತುಗಳ ಹಬ್ಬ ಎಂದೇ ಆಚರಿಸುತ್ತಾರೆ.
ಜಾನುವಾರುಗಳಿಗೆ ಸ್ನಾನ: ಸಾಮಾನ್ಯವಾಗಿ ಬೆಂಗಳೂರಿನಂತಹ ನಗರಗಳಲ್ಲಿ ಸಂಕ್ರಾಂತಿಗೆ ಎಳ್ಳು ಬೆಲ್ಲ ಕೊಟ್ಟು ಒಳ್ಳೆಯದು ಮಾತನಾಡು ಎಂದು ಶುಭ ಕೋರಿ ಸುಮ್ಮನಾಗುತ್ತಾರೆ. ಕೋಲಾರ ಭಾಗದಲ್ಲಿ ಹೀಗಿಲ್ಲ. ಬೆಳಗ್ಗೆ ಆದ ಕೂಡಲೇ ಒಂದೇ ಒಂದು ಜಾನುವಾರು ಬಿಡದೇ ಕೆರೆ ಅಥವಾ ಕುಂಟೆಗಳಿಗೆ ಕರೆದುಕೊಂಡು ಹೋಗಿ ಶುಭ್ರ ಸ್ನಾನ ಮಾಡಿಸುತ್ತಾರೆ. ಬೇಸಿಗೆ ಸಮೀಸುವ ಹಿನ್ನೆಲೆಯಲ್ಲಿ ಕುರಿಗಳಿಗೆ ಕೂದಲು ಕತ್ತರಿಸಿ ಟ್ರಿಮ್ ಮಾಡಿ ನವ ವಧುವಿನಂತೆ ಸಜ್ಜುಗೊಳಿಸಲಾಗುತ್ತದೆ. ಕೊಂಬುಗಳಿಗೆ ಬಣ್ಣ ಹಚ್ಚಿ ಜಾನುವಾರುಗಳ ಮೈ ಹಾಗೂ ಕೊಂಬುಗಳಿಗೆ ಕೆಂಪು ಮತ್ತು ಬಿಳಿ ಬಣ್ಣ ಬಳಿದು ಹೂವಿನ ಹಾರಗಳನ್ನು ಹಾಕುತ್ತಾರೆ. ಅಚ್ಚರಿ ಏನೆಂದರೆ ಒಂದೇ ಒಂದು ಜಾನುವಾರಿಗೂ ಆ ದಿನ ಸಣ್ಣ ನೋವು ಮಾಡಲ್ಲ. ಬೇಕಾಗುವಷ್ಟು ಹುಲ್ಲುಹಾಕಿ ಮನೆ ಮಗನಂತೆ ನೋಡಿಕೊಳ್ಳುವ ಸಂಪ್ರದಾಯ ಈಗಲೂ ಪ್ರತೀತಿಯಲ್ಲಿದೆ.
ರಾಸುಗಳಿಗೆ ಪೂಜೆ ಕಿಚ್ಚು: ಇಂಧನ ಇಲ್ಲದೇ ಚಲಿಸುವ ಎತ್ತಿನ ಗಾಡಿ ಸೇವೆ, ಉಳುಮೆ ಮಾಡುವ ರಾಸುಗಳಿಗೆ ರೈತರು ಸಂಕ್ರಾಂತಿ ದಿನದಂದು ವಿಶೇಷ ಅತಿಥ್ಯ ನೀಡುತ್ತಾರೆ. ರಾಸುಗಳನ್ನು ಬಿಸಿ ನೀರಿನಲ್ಲಿ ತೊಳೆಯುತ್ತಾರೆ. ಆ ನಂತರ ಅವುಗಳಿಗೆ ಬೆಳಗಿನಿಂದಲೂ ಹಣ್ಣು ಹಂಪಲು ತಿನ್ನಿಸುತ್ತಾರೆ. ಸಂಜೆ ವೇಳೆ ಗ್ರಾಮಗಳಲ್ಲಿ ನಡೆಯುವ ರಾಸುಗಳ ಮೆರವಣಿಗೆಗೆ ಸಜ್ಜುಗೊಳಿಸಲಾಗುತ್ತದೆ. ಮೈಸೂರು ಅಂಬಾರಿ ಹೊತ್ತುವ ಆನೆಗಳಿಗೆ ಶೃಂಗಾರ ಮಾಡಿದಂತೆ ಬಟ್ಟೆ, ಹೂವು, ಬಲೂನ್ ಮತ್ತಿತರ ವಸ್ತುಗಳಿಂದ ಎತ್ತುಗಳನ್ನು ಶೃಂಗಾರ ಮಾಡಲಾಗುತ್ತದೆ. ಆನಂತರ ಮನೆ ಮಂದಿಯೆಲ್ಲಾ ಪೂಜೆ ಮಾಡುತ್ತಾರೆ. ಸಂಜೆ ವೇಳೆಗೆ ಊರಿನಿಂದ ಊರು ದೇವರ ದೇವಸ್ಥಾನದ ವರೆಗೂ ಎತ್ತು- ರಾಸುಗಳನ್ನು ಮೆರವಣಿಗೆ ಮಾಡಲಾಗುತ್ತದೆ. ಸಂಕ್ರಾಂತಿ ಹಬ್ಬದ ದಿನದಂದು ಎತ್ತುಗಳಿಂದ ದುಡಿಮೆ ಮಾಡಿಸಿಕೊಳ್ಳುವುದಿಲ್ಲ ಎಂಬುದು ವಿಶೇಷ.
ರಾಸುಗಳ ರೇಸ್ ಗಾಗಿ ಮದ್ಯ: ಇನ್ನು ವರ್ಷ ಪೂರ್ತಿ ರೈತರಿಗಾಗಿ ದುಡಿಯುವ ರಾಸುಗಳಿಗೆ ರೈತರು ಬೆಳಗ್ಗೆ ಮದ್ಯ ಸೇವನೆ ಮಾಡಿಸುತ್ತಾರೆ. ಸಂಜೆ ಊರಿನಿಂದ ಊರ ದೇವರ ಗುಡಿಗೆ ಮೆರವಣಿಗೆ ಕರೆದೊಯ್ಯಲಾಗುತ್ತದೆ. ಮೆರವಣಿಗೆ ಮುಗಿದ ಕುಡಲೇ ರಾಸುಗಳನ್ನು ರೇಸ್ ಬಿಡಲಾಗುತ್ತದೆ. ಮದ್ಯದ ಅಮಲಿನಲ್ಲಿರುವ ರಾಸುಗಳು ಕುಣಿದು ಕುಪ್ಪಳಿಸಿ ದಣಿಯ ಮನೆ ಸೇರುತ್ತವೆ. ಊರ ಗುಡಿಯ ಪೂಜೆ ಮುಗಿದ ಬಳಿಕ ದೇವಾಲಯದ ಪಕ್ಕದಲ್ಲಿ ಕೊಂಡ ಹಾಯಿಸಲಾಗುತ್ತದೆ. ಬೆಂಕಿಯನ್ನು ಜಿಗಿಯುವ ರಾಸುಗಳನ್ನು ಬಿಟ್ಟು ಬಿಡಲಾಗುತ್ತದೆ. ಮೊದಲೇ ಮತ್ತಿನ ಗುಮ್ಮತ್ತಿನಲ್ಲಿರುವ ರಾಸುಗಳು ಓಡೋಡಿ ದಣಿ ಮನೆ ಸೇರುತ್ತವೆ. ಈ ಹಬ್ಬವನ್ನು ನೋಡಿದರೇನೆ ಚಂದ. ಇದಾದ ಬಳಿಕ ಊರಿನ ಹೊರಗೆ ಬಲಿ ಕೊಟ್ಟು ಜಾನುವಾರುಗಳಿಗೆ ದೃಷ್ಟಿ ತೆಗೆಯಲಾಗುತ್ತದೆ.
ತಮಿಳುನಾಡಿನ ಜಲ್ಲಿಕಟ್ಟು ಇದಲ್ಲದಿದ್ದರೂ ಇಡೀ ಊರು ಜನರೇ ಜಾನುವಾರುಗಳ ಖುಷಿಯಲ್ಲಿ ದಿನ ಕಳೆಯುತ್ತಾರೆ. ಕೋಲಾರ ಗ್ರಾಮಗಳಲ್ಲಿ ಎಲ್ಲು ಬೆಲ್ಲಕ್ಕಿಂತಲೂ ಎತ್ತು ಮತ್ತು ಜಾನುವಾರುಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಅವುಗಳ ಸಂಭ್ರಮದಲ್ಲಿಯೇ ಜನರು ತೇಲಾಡುತ್ತಾರೆ. ವರ್ಷ ಪೂರ್ತಿ ದುಡಿದು ರೈತನ ಕೈಗೆ ಫಸಲು ಕಣ ಸೇರುವ ಸುಗ್ಗಿಯ ಸಂಭ್ರಮದಲ್ಲಿ ಜಾನುವಾರುಗಳಿಗೂ ಅಷ್ಟೇ ಮಹತ್ವ ನೀಡುತ್ತಾರೆ. ಸಂಕ್ರಾಂತಿ ಎಂಬುದು ಈ ಭಾಗದಲ್ಲಿ ಎಳ್ಳು – ಬೆಲ್ಲಕ್ಕೆ ಸೀಮಿತವಾಗಿಲ್ಲ. ಬದಲಾಗಿ ಜಾನುವಾರುಗಳಿಗೆ ಮಿಸಲಿಟ್ಟಿದ್ದಾರೆ. ಈ ಸಂಪ್ರದಾಯ ನೂರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.
ಕೋಲಾರ ಭಾಗದಲ್ಲಿ ಸಂಕ್ರಾಂತಿ ಹಬ್ಬ ನೋಡುವುದೇ ಒಂದು ಸಂಭ್ರಮ. ಸ್ನೇಹಿತರು, ಸಂಬಂಧಿಕರು ಇದ್ದಲ್ಲಿ, ಒಮ್ಮೆ ಕೋಲಾರ ಭಾಗದ ಎತ್ತುಗಳ ಹಬ್ಬವನ್ನು ಸಂಭ್ರಮಿಸಿ ಬನ್ನಿ.