ಶಿವರಾಮ ಕಾರಂತ ಬಡಾವಣೆ ಪರಿಶೀಲಿಸಿ ಸಲಹೆ ನೀಡಿದ ಸಚಿವ ಡಿಕೆ ಶಿವಕುಮಾರ್

0
251

ಬೆಂಗಳೂರು, ಆ. 14 : ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ ಅವರು ಇಂದು ಡಾ. ಶಿವರಾಮ ಕಾರಂತ ಬಡಾವಣೆಗೆ ಭೇಟಿ ನೀಡಿದರು. ಈ ವೇಳೆ ಪ್ರಗತಿಯಲ್ಲಿರುವ ಕಾಮಗಾರಿಯ ಕೆಲಸಗಳನ್ನು ವೀಕ್ಷಣೆ ಮಾಡಿದರು. ಜೊತೆಗೆ ಕೆಲ ಕಾರ್ಯಗಳನ್ನು ಮಾರ್ಪಾಡು ಮಾಡಿ ಅಧಿಕಾರಿಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಜಮೀನು ನೀಡಿರುವ ರೈತರಿಗೆ ಆದ್ಯತೆಯ ಮೇರೆಗೆ ಪರಿಹಾರವನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಈ ಬಡಾವಣೆಯಲ್ಲಿ ವಸತಿ ಬೆಳವಣಿಗೆಯೊಂದಿಗೆ ವಾಣಿಜ್ಯ ಚಟುವಟಿಕೆಗಳಿಗೆ ಕೂಡ ಅವಕಾಶವನ್ನು ಕಲ್ಪಿಸಿಕೊಡುವಂತೆ ಸೂಚನೆ ನೀಡಿದರು. ಅಲ್ಲದೇ, ಉದ್ಯಾನವನ, ಕ್ರೀಡಾಂಗಣಕ್ಕಾಗಿ ಸುಮಾರು 45 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಇಲ್ಲಿ ವಾಣಿಜ್ಯ ಚಟುವಟಿಕೆಗಳಿಗೂ ಅನುಕೂಲವಾಗುವಂತೆ ರಸ್ತೆ ಅಗಲೀಕರಣಗೊಳಿಸಿ ಎಂದು ಸೂಚನೆ ನೀಡಿದರು.

ಜೊತೆಗೆ 45 ಮೀಟರ್ ರಸ್ತೆ ಬರುವ ಸಮೀಪದಲ್ಲಿ ಯಾರಿಗೂ ನಿವೇಶನಗಳನ್ನು ಹಂಚಿಕೆ ಮಾಡಬಾರದು. ಇಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಜಾಗವನ್ನು ಬಳಕೆ ಮಾಡಬೇಕು ಎಂದು ಸಚಿವ ಡಿಕೆ ಶಿವಕುಮಾರ್ ಅವರು ಸೂಚಿಸಿದರು. ಇದರೊಂದಿಗೆ ಶಿವರಾಮ ಕಾರಂತ ಬಡಾವಣೆಯಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಹಾದುಹೋಗುವ ಮಾರ್ಗವನ್ನು ಕೂಡ ಅವರು ಪರಿಶೀಲಿಸಿದರು. ಬಡಾವಣೆಯ ಬಳಿ ಐ.ಟಿ. ಹಬ್ ಮಾಡಲು ಜಾಗವನ್ನು ಮೀಸಲಿಡುವಂತೆ ಆದೇಶವನ್ನು ನೀಡಿದರು.

ಸಚಿವರು ಶಿವರಾಮ ಕಾರಂತ ಬಡಾವಣೆ ಪರಿಶೀಲಿಸುವಾಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ರಾಕೇಶ್ ಸಿಂಗ್, ಭಾ.ಆ.ಸೇ., ಆಯುಕ್ತರು, ಉಪ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು, ವಿಶೇಷ ಭೂಸ್ವಾಧೀನಾಧಿಕಾರಿಗಳು, ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇನ್ನು ಇಂದು ಮಧ್ಯಾಹ್ನ 3 ಗಂಟೆಗೆ ಉಪಮುಖ್ಯಮಂತ್ರಿಗಳು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೇಟಿ ನೀಡಲಿದ್ದಾರೆ. ಇಲ್ಲೂ ಕೂಡ ಬಡಾವಣೆ ನಿರ್ಮಾಣ ಕಾರ್ಯಗಳನ್ನು ಪರಿಶೀಲನೆ ನಡೆಸಲಾಗಿದೆ. ಇವರೊಂದಿಗೆ ಬಿಡಿಎ ಅಧಿಕಾರಿಗಳು ಕೂಡ ಜೊತೆಗೆ ಇರಲಿದ್ದಾರೆ.