22.6 C
Bengaluru
Saturday, July 27, 2024

Karnataka Police ದೂರು ಪ್ರಾಧಿಕಾರ ಅಧ್ಯಕ್ಷರಾಗಿ ಜಸ್ಟೀಸ್ ಎನ್‌.ಕೆ.ಸುಧೀಂದ್ರರಾವ್ ನೇಮಕ: ಪೊಲೀಸರಲ್ಲಿ ಶುರುವಾಯ್ತು ನಡುಕ!

#police, #justice N K Sudhindra Rao, #Karnataka police Complaint Authority

ಬೆಂಗಳೂರು,ಆ. 03: ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಅಧ್ಯಕ್ಷನ್ನಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌.ಕೆ. ಸುಧೀಂದ್ರರಾವ್ ಅವರನ್ನು ನೇಮಿಸಿ ಸರ್ಕಾರ ಅದೇಶ ಹೊರಡಿಸಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಸಂಬಂಧ ಜಸ್ಟೀಸ್‌ ಎನ್‌.ಕೆ. ಸುಧೀಂದ್ರರಾವ್‌ ಹೊರಡಿಸಿದ್ದ ತೀರ್ಪುಗಳು ದೇಶದೆಲ್ಲೆಡೆ ದೊಡ್ಡ ಸಂಚಲನ ಹುಟ್ಟುಹಾಕಿತ್ತು. ಹಲ್ಲು ಕಿತ್ತ ಹಾವಿನಂತಿದ್ದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕವಾಗಿದ್ದು, ಇದೀಗ ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಜಸ್ಟೀಸ್ ಎನ್‌.ಕೆ. ಸುಧೀಂದ್ರರಾವ್ ಅವರ ಹಿನ್ನೆಲೆ, ಈ ಪೊಲೀಸ್ ದೂರು ಪ್ರಾಧಿಕಾರ ಎಂದರೆ ಏನು ? ಇದನ್ನು ಸಾರ್ವಜನಿಕರು ಹೇಗೆ ಬಳಸಿಕೊಳ್ಳಬೇಕು ? ಎಂಬುದರ ಸಮಗ್ರ ವಿವರ ಇಲ್ಲಿದೆ.

Karnataka “police” complaint Authority:

ಕರ್ನಾಟಕ ಪೊಲೀಸ್ ಕಾಯ್ದೆ 1964 ಕಲಂ 4 ಕ್ಕೆ ತಿದ್ದುಪಡಿತರುವ ಮೂಲಕ ರಾಜ್ಯ ಸರ್ಕಾರ ಕರ್ನಾಕಟದಲ್ಲಿ ರಾಜ್ಯ ಪೊಲೀಸ್ ದೂರು ಪ್ರಾಧಿಕಾರವನ್ನು ರಚಿಸಿತು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಗಳನ್ನು ರಚಿಸಿದೆ. ಸೆಕ್ಷನ್ 20 C, 20 D ಈ ದೂರು ಪ್ರಾಧಿಕಾರದ ಕಾರ್ಯದ ಬಗ್ಗೆ ವಿವರಿಸುತ್ತದೆ.

2019 ರಲ್ಲಿ ಜಸ್ಟೀಸ್ ಸಿ.ಅರ್. ಕುಮಾರಸ್ವಾಮಿ ಅವರನ್ನು ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿತ್ತು. ಪೊಲೀಸ್ ದೂರು ಪ್ರಾಧಿಕಾರ ಅಧ್ಯಕ್ಷರ ಅಧಿಕಾರ ಅವಧಿ ಕೇವಲ ಮೂರು ವರ್ಷ ಮಾತ್ರ. ಜಸ್ಟೀಸ್ ಸಿ.ಆರ್. ಕುಮಾರಸ್ವಾಮಿ ಅವರ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಹೈಕೋರ್ಟ್‌ ನಿವೃತ್ತ ನ್ಯಾ. ಎನ್‌. ಕೆ. ಸುಧೀಂದ್ರರಾವ್‌ ಅವರನ್ನು ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಅಧ್ಯಕ್ಷರ ಜತೆಗೆ ನಿವೃತ್ತ ಐಎಎಸ್ ಅಧಿಕಾರಿಯನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಸದಶ್ಯ ಕಾರ್ಯದರ್ಶಿಯನ್ನಾಗಿ ಎಡಿಜಿಪಿ ದರ್ಜೆಯ ಪೊಲೀಸ್ ಅಧಿಕಾರಿಯನ್ನು ಈ ಪ್ರಾಧಿಕಾರ ಹೊಂದಿರುತ್ತದೆ.

Duties of Karnataka Police Complaint Authority

ಸಾರ್ವಜನಿಕರು ನೀಡುವ ದೂರುಗಳನ್ನು ಪೊಲೀಸ್ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸದೇ ಪಕ್ಷಪಾತ ಮಾಡಿದರೆ, ಎಫ್ಐಆರ್ ದಾಖಲಿಸಲು ನಿರಾಕರಿಸಿದರೆ, ಪ್ರಕರಣಗಳಲ್ಲಿ ಸರಿಯಾಗಿ ತನಿಖೆ ನಡೆಸದೇ ಅನ್ಯಾಯ ಮಾಡಿದ್ದರೆ, ಅಥವಾ ಪೊಲೀಸರು ಕಿರುಕುಳ ನೀಡಿದ್ದರೆ, ಪೊಲೀಸ್ ಕಸ್ಟಡಿಯಲ್ಲಿ ಕಿರುಕುಳ ನೀಡಿದ್ದರೆ ಅಥವಾ ಕೇಸು ದಾಖಲಿಸಲು ಲಂಚ ಅಥವಾ ಇನ್ನಿತರೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದರೆ ಅಂತಹ ಪೊಲೀಸ್ ಅಧಿಕಾರಿ ವಿರುದ್ಧ ಸಾರ್ವಜನಿಕರು ದೂರು ನೀಡಬಹುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಇರುತ್ತದೆ. ಕೆಳ ದರ್ಜೆಯ ಪೊಲೀಸ್ ಅಧಿಕಾರಿಗಳ ವಿರುದ್ಧ ಅಲ್ಲಿ ದೂರು ನೀಡಬಹುದು. ಮೇಲ್ದರ್ಜೆ ಅಧಿಕಾರಿಗಳ ವಿರುದ್ಧ ನೇರವಾಗಿ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು. ಅಥವಾ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಗಳು ದೂರು ಅರ್ಜಿಯನ್ನು ಸರಿಯಾಗಿ ವಿಚಾರಣೆ ನಡೆಸದೇ ಇದ್ದ ಪಕ್ಷದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು.

Power of Karnataka police Complaint Authority :ಪ್ರಾಧಿಕಾರದ ಅಧಿಕಾರ : ಸಾರ್ವಜನಿಕರು ಪೊಲೀಸರ ವಿರುದ್ಧ ನೀಡುವ ದೂರುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸುತ್ತವೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ವರದಿ ಸಮೇತ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರ ( ಇಲಾಖೆ ) ಅಥವಾ ಸರ್ಕಾರ ಕಾನೂನು ಕ್ರಮ ಜರುಗಿಸುತ್ತದೆ.

Address of Karnataka state police complaint Authority

ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ ವಿಧಾನ ಸೌಧ ಸಮೀಪ ಇರುವ ವಿಶ್ವೇಶ್ವರಯ್ಯ ಟವರ್ ನ ಮೂರನೇ ಪ್ಲೋರ್ ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರವಿದೆ. ಹೆಚ್ಚಿನ ಸಂಪರ್ಕಕ್ಕೆ 080-22942105 , 080-22034321 ಸಂಪರ್ಕಿಸಬಹುದು.

Justice N K Sudhindra Rao Biodata:

ಜಸ್ಟೀಸ್‌ ಎನ್‌.ಕೆ. ಸುಧೀಂದ್ರರಾವ್‌ ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿಯವರು. ಕಾನೂನು ಪದವಿ ಮುಗಿಸಿ ಬಂಗಾರುಪೇಟೆಯಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ವೇಳೆ ಜಸ್ಟೀಸ್‌ ಎನ್‌.ಕೆ. ಸುಧೀಂದ್ರರಾವ್‌ ಅವರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಭ್ರಷ್ಟರಿಗೆ ಸಿಂಹ ಸ್ವಪ್ನ ಎಂದೇ ಖ್ಯಾತನಾಮರಾದರು. ರಾಜಕಾರಣಿಗಳ ಅಕ್ರಮ ಆಸ್ತಿ ಗಳಿಕೆ, ಅಕ್ರಮ ಹಣ ಸ್ವೀಕಾರ ಸಂಬಂಧ ಪ್ರಕರಣಗಳಲ್ಲಿ ಮಹತ್ವದ ತೀರ್ಪು ನೀಡಿದ್ದರು. ಜಸ್ಟೀಸ್‌ ಎನ್‌.ಕೆ. ಸುಧೀಂದ್ರರಾವ್‌ ಅವರ ಪ್ರಾಮಾಣಿಕ ನಡೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರು ನೀಡಿದ ತೀರ್ಪುಗಳು ಹೊಸ ಮೈಲಿಗಲ್ಲು ಸೃಷ್ಟಿಸಿತು.

ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರೇ ಅಧಿಕಾರದಿಂದ ಕೆಳಗೆ ಇಳಿದು ನ್ಯಾಯಾಂಗ ಬಂಧನಕ್ಕೆ ಒಳಪಟ್ಟರು. ಸಮಾಜವನ್ನು ಕ್ಯಾನ್ಸರ್ ಆಗಿ ಕಾಡುತ್ತಿರುವ ಭ್ರಷ್ಟಾಚಾರ ತಳಮಟ್ಟದಿಂದಲೂ ನಿರ್ಮೂಲನೆಯಾಗಬೇಕು ಎಂದು ಅನೇಕ ಸಾರ್ವಜನಿಕ ಸಮಾವೇಶಗಳಲ್ಲಿ ಜಸ್ಟೀಸ್‌ ಎನ್‌.ಕೆ ಸುಧೀಂದ್ರರಾವ್ ತಮ್ಮ ಮನದಾಳವನ್ನು ಹಂಚಿಕೊಂಡಿದ್ದರು. ಜಸ್ಟೀಸ್ ಎನ್‌.ಕೆ. ಸುಧೀಂದ್ರರಾವ್‌ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದ ವೇಳೆ ಲೋಕಾಯುಕ್ತ ಸಂಸ್ಥೆಯ ಹೆಸರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಲೋಕಾಯುಕ್ತ ಪೊಲೀಸರು, ಲೋಕಾಯುಕ್ತ ಸಂಸ್ಥೆ ಮೇಲಿನ ಜನರ ನಂಬಿಕೆ, ನ್ಯಾಯದ ಮೇಲಿನ ನಂಬಿಕೆ ದುಪ್ಪಟ್ಟುಗೊಳಿಸಿದರು. ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದರು. ಆ ಬಳಿಕ ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ನಿರ್ಗಮಿಸಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಹಲ್ಲು ಕಿತ್ತ ಹಾವಿನಂತಿರುವ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರಕ್ಕೆ ಜಸ್ಟೀಸ್‌ ಎನ್‌.ಕೆ. ಸುಧೀಂದ್ರರಾವ್ ಅಧ್ಯಕ್ಷರಾಗಿರುವುದು ಹೊಸ ಭರವಸೆಗಳನ್ನು ಹುಟ್ಟಿಹಾಕಿದೆ.

Related News

spot_img

Revenue Alerts

spot_img

News

spot_img