ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಹಶಿಲ್ದಾರರ ಕಚೇರಿಯ ಪ್ರಥಮ ದರ್ಜೆ ಸಹಾಯಕ ವೆಂಕಟಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.ಹಿರೇಕೊಳಚಿ ಗ್ರಾಮದ ನಿವೃತ್ತ ಶಿಕ್ಷಕ ಲಕ್ಕಪ್ಪ ಅಂಗಡಿ ವಡ್ಡರ ಅವರಿಂದ ಲಂಚದ ಹಣ ಪಡೆಯುತ್ತಿರುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.ತಾಲ್ಲೂಕಿನ ಹಿರೇಕೊಳಚಿ ಗ್ರಾಮದ ವಡ್ಡರ ಚೌಡಮ್ಮ ಎಂಬುವವರಿಗೆ ಸೇರಿದ ಹಗರನೂರು ಕಂದಾಯ ಗ್ರಾಮದ ಸ.ನಂ. 330/ಎ. ಜಮೀನಿನ ಪಹಣಿ ತಿದ್ದುಪಡಿ ಮಾಡಲು ನ್ಯಾಯಾಲಯಆದೇಶವನ್ನು ನೀಡಿತ್ತು.
ನ್ಯಾಯಾಲಯ ನಿರ್ದೇಶನದ ಮೇರೆಗೆ ಪಹಣಿ ತಿದ್ದಪಡಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆದರೂ ಕೆಲದಿನಗಳಿಂದ ಪಹಣಿ ತಿದ್ದುಪಡಿಗೆ ಸತಾಯಿಸಿದ್ದ ವೆಂಕಟಸ್ವಾಮಿ ಈ ಕೆಲಸ ಮಾಡಿಕೊಡಲು 70 ಸಾವಿರ ರೂ. ಲಂಚ ಕೇಳಿದ್ದ.ಚೌಡಮ್ಮನವರ ಪುತ್ರ ನಿವೃತ್ತ ಶಿಕ್ಷಕ ಲಕ್ಕಪ್ಪ ವಡ್ಡರ್ ಅವರಿಂದ ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಶ್ರೀದೇವಿ ಹೋಟೆಲ್ ನಲ್ಲಿ ಗುಮಾಸ್ತ 65 ಸಾವಿರ ರೂ. ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಳ್ಳಾರಿ ಹಾಗೂ ಹೊಸಪೇಟೆ ಲೋಕಾಯುಕ್ತ ಡಿವೈಎಸ್ಪಿ, ಇನ್ಸ್ಪೆಕ್ಟರ್ಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಇದೀಗ ಲೋಕಾಯುಕ್ತ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೆಂಕಟಸ್ವಾಮಿಯನ್ನು ಬಂಧಿಸಿದ್ದಾರೆ.ಲೋಕಾಯುಕ್ತ ಇನ್ ಸ್ಪೆಕ್ಟರ್ ಗಳಾದ ಸಂಗಮೇಶ, ಸುರೇಶಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದರು.