ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಉಪ ನೋಂದಣಾಧಿಕಾರಿಗಳು ಸೇವೆಗೆ ಸೇರಿದ ಐದು ವರ್ಷದ ಬಳಿಕ ಬಡ್ತಿ ಪಡೆದು ಬಿ ವೃಂದಕ್ಕೆ ( ಗೆಜೆಡೆಟ್ ಅಧಿಕಾರಿ) ಸೇರ್ಪಡೆಯಾಗುತ್ತಿದ್ದರು. ಹಾಲಿ ಬಿಜೆಪಿ ಸರ್ಕಾರ ಇದೀಗ ಈ ನಿಯಮ ಬದಲಿಸುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದೆ.
ಕಂದಾಯ ಇಲಾಖೆಯ ಉಪ ನೋಂದಣಾಧಿಕಾರಿಗಳು ನೇಮಕವಾದ ಕೂಡಲೇ ಬಿ ವೃಂದಕ್ಕೆ ವಿಲೀನ ಮಾಡಲು ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ. ಸಂಪುಟ ಸಭೆ ಅನುಮೋದನೆ ಸಿಕ್ಕ ಕೂಡಲೇ ಉಪ ನೋಂದಣಾಧಿಕಾರಿಗಳು ನೇಮಕವಾದ ದಿನದಿಂದಲೇ ಬಿ ವೃಂದಕ್ಕೆ ಸೇರ್ಪಡೆಯಾಗಲಿದ್ದಾರೆ.
ಸಂಪುಟ ಉಪ ಸಮಿತಿ ಶಿಫಾರಸು:
ಕಂದಾಯ ಸಚಿವ ಆರ್. ಅಶೋಕ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಉಪ ಸಮಿತಿ ಸಭೆಯಲ್ಲಿ ಉಪ ನೊಂದಣಾಧಿಕಾರಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಮಹತ್ವದ ನಿಯಮ ಬದಲಿಸಲು ತೀರ್ಮಾನಿಸಲಾಗಿದೆ.
‘ಸಿ’ ವೃಂದದಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಬಳಿಕ ‘ಬಿ’ ವೃಂದಕ್ಕೆ ಸೇರ್ಪಡೆ ಮಾಡುವ ನಿಯಮ ಬದಲಿಸಲು ಕಂದಾಯ ಇಲಾಖೆ ಚಿಂತನೆ ನಡೆಸಿತ್ತು. ಈ ನಿಟ್ಟಿನಲ್ಲಿ ನೀಡಿದ ವರದಿಯ ಬಗ್ಗೆ ಕಳೆದ ಏಪ್ರಿಲ್ ನಲ್ಲಿ ನಡೆದ ಸಂಪುಟ ಸಭೆಯ ಉಪ ಸಮಿತಿಯಲ್ಲಿ ಚರ್ಚೆ ನಡೆಸಲಾಗಿದೆ. ಅದರ, ಪ್ರಕಾರ ಸಬ್ ರಿಜಿಸ್ಟ್ರಾರ್ ಹುದ್ದೆಯನ್ನು ‘ಸಿ’ ವೃಂದದಿಂದ ‘ಬಿ’ ವೃಂದಕ್ಕೆ ವಿಲೀನಗೊಳಿಸುವ ಪ್ರಸ್ತಾಪ ಮಾಡಲಾಗಿದೆ. ಇದರ ಜತೆಗೆ ತಾಲೂಕು ಸಬ್ ರಿಜಿಸ್ಟ್ರಾರ್ ಹುದ್ದೆಯನ್ನು ರದ್ದು ಪಡಿಸುವ ಬಗ್ಗೆಯೂ ಚಿಂತನೆ ಮಾಡಿದೆ.
ಈ ಕುರಿತು ಸಚಿವ ಸಂಪುಟದ ಉಪ ಸಮಿತಿಯ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಉಪ ಸಮಿತಿಯ ತೀರ್ಮಾನದ ಬಳಿಕ ಸಚಿವ ಸಂಪುಟ ಅನುಮೋದನೆಗೆ ಕಳುಹಿಸಲಾಗುತ್ತದೆ. ಸಂಪುಟ ಅನುಮೋದನೆ ಸಿಕ್ಕ ಕೂಡಲೇ ಕರ್ನಾಟಕದಲ್ಲಿ ಉಪ ನೋಂದಣಾಧಿಕಾರಿ ಹುದ್ದೆ ಬಿ ವೃಂದಕ್ಕೆ ವಿಲೀನವಾಗಲಿದೆ. ಇದರಿಂದ ಹೊಸದಾಗಿ ಉಪ ನೋಂದಣಾಧಿಕಾರಿ ಹುದ್ದೆಗೆ ಬಡ್ತಿ ಪಡೆಯುವ ಅಥವಾ ನೇಮಕವಾಗುವ ಸಿಬ್ಬಂದಿ ಗೆಜೆಟೆಡ್ ಅಧಿಕಾರಿ ಸ್ಥಾನಮಾನ ದೊರೆಯಲಿದೆ.
ಆದರೆ, ತಾಲೂಕು ಸಬ್ ರಿಜಿಸ್ಟ್ರಾರ್ ಹುದ್ದೆಯನ್ನು ರದ್ದು ಪಡಿಸುವ ಪ್ರಸ್ತಾಪ ಮಾಡಿರುವುದು ಉಪ ನೋಂದಣಾಧಿಕಾರಿಗಳ ವಲಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ. ಸರ್ಕಾರದ ಈ ಪ್ರಸ್ತಾಪದ ಬಗ್ಗೆ ಉಪ ನೋಂದಣಾಧಿಕಾರಿ ವಲಯದಲ್ಲಿ ಅಪರಸ್ವರ ಕೇಳಿ ಬರುತ್ತಿದೆ. ರದ್ದಾಗುವ ತಾಲೂಕು ಸಬ್ ರಿಜಿಸ್ಟ್ರಾರ್ ಗಳನ್ನು ಕೇಂದ್ರ ಕಚೇರಿಗೆ ನಿಯೋಜನೆ ಮಾಡಲಾಗುತ್ತದೆ. ಈ ಎರಡು ಮಹತ್ವದ ಪ್ರಸ್ತಾವನೆಯನ್ನು ತ್ವರಿತವಾಗಿ ಸಲ್ಲಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ. ಈ ಪ್ರಸ್ತಾವನೆಯನ್ನು ಕಳೆದ ತಿಂಗಳೇ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.