20.5 C
Bengaluru
Tuesday, July 9, 2024

ಭಾರತದಲ್ಲಿ ಅಕ್ರಮ ವಾಸ ಹೈಕೋರ್ಟ್ ನಿಂದ ಗುಜರಿ ಅಂಗಡಿ ಮಾಲಕನಿಗೆ ಜಾಮೀನು ನಿರಾಕರಣೆ

ಬೆಂಗಳೂರು, ಫೆಬ್ರವರಿ. 09;ಕಳೆದ 20 ವರ್ಷಗಳಿಂದ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಆರೋಪದಲ್ಲಿ ಬಂಧನದಲ್ಲಿರುವ ಬಾಂಗ್ಲಾದೇಶದ ಪ್ರಜೆ ಎನ್ನಲಾದ ಗುಜರಿ ಅಂಗಡಿಯ ಮಾಲೀಕನೊಬ್ಬನಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದೆ.ಬೆಂಗಳೂರಿನಲ್ಲಿ ಗುಜರಿ ಅಂಗಡಿ ಹೊಂದಿದ್ದ ಮಾಲೀಕ ಸೈಯದುಲ್ ಅಖೋನ್ ಅಲಿಯಾಸ್ ಶಾಹಿದ್ ಅಹ್ಮದ್ (42) ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿ ಜಾರಿಗೊಳಿಸಿದೆ,

ಸೈಯದುಲ್ ಅಖೋನ್ ಅಲಿಯಾಸ್ ಶಾಹಿದ್ ಅಹ್ಮದ್ ತನ್ನನ್ನು ಭಾರತದ ಪ್ರಜೆ ಎಂದು ಬಿಂಬಿಸಿಕೊಳ್ಳುವ ಸಲುವಾಗಿ ಆಧಾರ್ ಕಾರ್ಡ್ ಸೇರಿ ಹಲವು ನಕಲಿ ಗುರುತಿನ ಚೀಟಿ,ಪುರಾವೆಗಳನ್ನು ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಇಂತಹ ಕೆಲಸಗಳು ದೇಶದ ಭದ್ರತೆಗೆ ಅಪಾಯ ಉಂಟು ಮಾಡುವಂತಹದ್ದಾಗಿದೆ ಎಂದು ಹೈಕೋರ್ಟ್‌ಅರ್ಜಿ ವಜಾಗೊಳಿಸಿ ಆದೇಶಿಸಿದೆ.ಗುಜರಿ ಅಂಗಡಿ ಮಾಲೀಕ ಸೈಯದುಲ್ ಅಖೋನ್ ಅಲಿಯಾಸ್ ಶಾಹಿದ್ ಅಹ್ಮದ್ ವಿರುದ್ಧಗಂಭೀರವಾದ ಆರೋಪಗಳಿವೆ.ಆರೋಪಿ ತಾನು ಭಾರತೀಯ ಪ್ರಜೆಯಾಗಿದ್ದುಕೊಂಡು ಉತ್ತರಪ್ರದೇಶದ ನಿವಾಸಿ ಎಂದು ತಿಳಿಸಿ,ಅದನ್ನು ಸಾಬೀತುಪಡಿಸುವ ಹಲವು ದಾಖಲೆಗಳನ್ನು ಆರೋಪಿಯ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ಆದರೆ, ಆರೋಪಿ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಅಕ್ರಮವಾಗಿ ಭಾರತದೊಳಗೆ ನುಸುಳಿ, ಕಳೆದ 20 ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾನೆ ಎನ್ನುವುದನ್ನು ತನಿಖಾಧಿಕಾರಿ ಸಲ್ಲಿಸಿರುವ ಆರೋಪಪಟ್ಟಿ ಬಹಿರಂಗಪಡಿಸಿದೆ. ಇನ್ನೂ ಹಲವು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿದಾರ ಜಾಮೀನಿಗೆ ಅರ್ಹನಲ್ಲಎಂದು ಹೈಕೋರ್ಟ್, ಜಾಮೀನು ಅರ್ಜಿ ವಜಾಗೊಳಿಸಿದೆ.

ಭಾರತೀಯ ಪ್ರಜೆಯಾಗಿರುವ ಆರೋಪಿ, ಉತ್ತರಪ್ರದೇಶದಲ್ಲಿ ಜನಿಸಿದ್ದಾನೆ. ಆತನ ಕುಟುಂಬದವರು ಈಗಲೂ ಉತ್ತರ ಪ್ರದೇಶದಲ್ಲೇ ನೆಲೆಸಿದ್ದಾರೆ. ಅರ್ಜಿದಾರ ಭಾರತೀಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತಿತರ ದಾಖಲೆಗಳನ್ನು ಹೊಂದಿದ್ದಾನೆ.ಆರೋಪಿಯ ಪರ ವಕೀಲರು, ಆತನ ವಿರುದ್ಧ ದಾಖಲಿಸಿರುವ ಪ್ರಕರಣ ಆಧಾರರಹಿತವಾಗಿದೆ.ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದೆ.ತನಿಖಾಧಿಖಾರಿಗಳು ಆ ಯಾವುದೇ ದಾಖಲೆಗಳನ್ನು ಪರಿಗಣಿಸಿದೆಯೇ ಅರ್ಜಿದಾರನ ವಿರುದ್ಧ ತಪ್ಪು ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಆರೋಪಿ ಬದ್ಧನಾಗಿರಲಿದ್ದಾನೆ. ಆದ್ದರಿಂದ, ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.

ಪ್ರಕರಣದ ಮಾಹಿತಿ;
ಅಕ್ರಮವಾಗಿ ಭಾರತದಲ್ಲಿ ನೆಲೆಸಿದ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ ಅರ್ಜಿದಾರನನ್ನು 2022 ರ ಮೇ 23 ರಂದು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದರು. ಆರೋಪಿಯ ವಿರುದ್ಧ ವಿದೇಶಿಯರ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಪಾಸ್‌ಪೋರ್ಟ್ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿದ್ದ ಅಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ದಾಖಲೆಗಳಪಟ್ಟಿ ಸಲ್ಲಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸೈಯದುಲ್ ಅಖೋನ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.

ಸರ್ಕಾರದ ಪರ ವಕೀಲರು, ಗಂಭೀರ ಅಪರಾಧ ಕೃತ್ಯವೆಸಗಿರುವ ಆರೋಪ ಅರ್ಜಿದಾರನ ಮೇಲಿದೆ. ಆತ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಪಾಸ್‌ಪೋರ್ಟ್ ಹಾಗೂ ವೀಸಾ ಇಲ್ಲದೆಯೇ ಭಾರತ ಪ್ರವೇಶಿಸಿದ್ದಾನೆ. ಬೆಂಗಳೂರಿನಲ್ಲಿ ಗುಜರಿ ಅಂಗಡಿ ನಡೆಸುತ್ತಿರುವ ಆತ ತನ್ನ ವಾಸದ ವಿಳಾಸವನ್ನು ಬೆಂಗಳೂರಿಗೆ ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದ. ಕಳೆದ 20 ವರ್ಷಗಳಿಂದಲೂ ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಅರ್ಜಿದಾರ ಪ್ರಕರಣದ ಇತರ ಆರೋಪಿಗಳೊಂದಿಗೆ ಸೇರಿ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಮಾಡಿದ್ದಾನೆ. ಆದ್ದರಿಂದ, ಆತನಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.

Related News

spot_img

Revenue Alerts

spot_img

News

spot_img