Revenue Facts

ವಾರಸುದಾರನಿಲ್ಲದ ಆಸ್ತಿಗಳ ವಿಲೇವಾರಿ ಹೇಗೆ? Escheat ಬಗ್ಗೆ ನಿಮಗೆಷ್ಟು ಗೊತ್ತು ?

ವಾರಸುದಾರನಿಲ್ಲದ ಆಸ್ತಿಗಳ ವಿಲೇವಾರಿ ಹೇಗೆ? Escheat  ಬಗ್ಗೆ ನಿಮಗೆಷ್ಟು ಗೊತ್ತು ?

ದುಷ್ಟಾಂತ 1:
ಒಬ್ಬ ವ್ಯಕ್ತಿ ಹೆಸರಿನಲ್ಲಿ ನೂರು ಕೋಟಿ ರೂಪಾಯಿ ಆಸ್ತಿ ಇತ್ತು. ಆತನಿಗೆ ಮಕ್ಕಳು ಇರಲಿಲ್ಲ, ಅಂದರೆ ವಾರಸುದಾರರು ಇಲ್ಲ. ಆತನ ಪತ್ನಿ ಮೊದಲೇ ತೀರಿ ಹೋಗಿದ್ದಳು. ಆನಂತರದಲ್ಲಿ ಆ ಭೂ ಮಾಲೀಕ ಕೂಡ ಕಾಲವಾಗುತ್ತಾನೆ. ಈ ಸಂದರ್ಭ ಒದಗಿ ಬಂದರೆ ಆ ಆಸ್ತಿಯನ್ನು ಸರ್ಕಾರ ಏನು ಮಾಡುತ್ತದೆ.?

ದುಷ್ಟಾಂತ 2: ಒಬ್ಬ ವ್ಯಕ್ತಿ ಬೆಂಗಳೂರಿನಲ್ಲಿ ನಿವೇಶನ ಹೊಂದಿದ್ದ. ಆತನಿಗೆ ಕೆಲಸ ಸಿಕ್ಕಿ ವಿದೇಶಕ್ಕೆ ಹೋಗುತ್ತಾನೆ. ಹೋದ ಬಳಿಕ ತನ್ನ ಪತ್ನಿ ಮತ್ತು ಮಕ್ಕಳನ್ನು ಅಲ್ಲಿಗೆ ಕರೆಸಿಕೊಂಡು ಅಲ್ಲಿಯೇ ಖಾಯಂ ನಾಗರಿಕನಾಗುತ್ತಾನೆ. ತದನಂತರ ಆತ ಅಲ್ಲಿಯೇ ವರ್ಷಾನುಘಟ್ಟನೇ ಉಳಿದು ಬೆಂಗಳೂರಿನಲ್ಲಿ ಮಾಡಿರುವ ಸ್ವತ್ತು ಮರೆತು, ಅಥವಾ ಅದನ್ನು ಗುರುತಿಸಲಾರದ ಪರಿಸ್ಥಿತಿ ಬರಬಹುದು. ಸುಮಾರು ವರ್ಷಗಳ ಆ ಆಸ್ತಿಯ ವಾರಸುದಾರಿಗೆ ಯಾರೂ ಕ್ಲೇಮ್ ಮಾಡಿದ್ದರೆ ಈ ಆಸ್ತಿ ಏನಾಗುತ್ತದೆ ? ಹಿಂದೂ ವಾರಸು ಕಾಯ್ದೆ 1956 ಏನು ಹೇಳುತ್ತದೆ. Escheate ಎಂದರೇನು ? ಈ ಬಗ್ಗೆ ನಿಮಗೆ ಗೊತ್ತಿರಲಿ.

ಯಾವುದೇ ಒಂದು ಆಸ್ತಿಯ ಉತ್ತರಾಧಿಕಾರಿ ಮಾಯವಾದರೆ, ಅವನಿಗೆ ಯಾರೂ ಉತ್ತರಾಧಿಕಾರಿ ಇಲ್ಲದಿದ್ದರೆ ಆತನ ಆಸ್ತಿ ಮತ್ತು ವಸ್ತುಗಳು ಸರ್ಕಾರದ ಪಾಲಾಗುತ್ತವೆ. ಹಿಂದೂ ವಾರಸು ಕಾಯ್ದೆ 1956 ಕಲಂ 29 ಇದನ್ನು ಹೇಳುತ್ತದೆ. ಇದನ್ನೇ Escheate ( ಎಶ್ಚಿಯೇಟ್ ) ಎಂದು ಕಾನೂನು ಪರಿಭಾಷೆಯಲ್ಲಿ ಕರೆಯಲಾಗುತ್ತದೆ. ಎಷ್ಟಿಯೇಟ್ ಎಂದರೆ ಯಾರೂ ವಾರಸುದಾರರು ಇಲ್ಲದ ಆಸ್ತಿ ಮತ್ತು ಸ್ವತ್ತುಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆಯುವ ಪ್ರಕ್ರಿಯೆ ಎಂದರ್ಥ.

ಒಂದು ಆಸ್ತಿಯ ಮಾಲೀಕ ತನ್ನ ಸ್ವಯಾರ್ಜಿತ ಅಥವಾ ಪಿತ್ರಾರ್ಜಿತವಾಗಿ ಬಂದ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಮಾಡದೇ ಯಾರಿಗೂ ದಾನ ಪತ್ರ ಮಾಡದೇ ಅಥವಾ ಯಾರಿಗೂ ಹೇಳದೇ ಅಕಾಲಿಕವಾಗಿ ಇಲ್ಲವೇ ಸ್ವಾಭಾವಿಕವಾಗಿ ನಿಧನ ಹೊಂದಿದರೆ, ಆತನಿಗೆ ಯಾರೂ ವಾರಸುದಾರರು ಇಲ್ಲದಿದ್ದ ಸಂದರ್ಭದಲ್ಲಿ ಅಂತಹ ಸ್ವತ್ತಗಳನ್ನು ಸರ್ಕಾರ ಕಾನೂನು ಬದ್ಧವಾಗಿ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಅದು ಸ್ಥಿರಾಸ್ತಿ ಆಗಿರಲಿ, ಚರಾಸ್ತಿ ಆಗಿರಲಿ.

ಪ್ರಕ್ರಿಯೆ ಹೇಗೆ :
ವಾರಸುದಾರನಿಲ್ಲದ ವ್ಯಕ್ತಿ ಮೃತಪಟ್ಟು ಆತನ ಹೆಸರಿನಲ್ಲಿ ಆಸ್ತಿ ಇದ್ದರೆ, ಆಸ್ತಿಯ ವಾರಸುದಾರರ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕೃತ ಪ್ರಕಟಣೆ ಹೊರಡಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಡಂಗೂರ ಹಾಕಬೇಕು. ಸಂಬಂಧಪಟ್ಟ ಆಸ್ತಿಗೆ ಯಾರೂ ವಾರಸದಾರರು ಪತ್ತೆಯಗದಿದ್ದ ಪಕ್ಷದಲ್ಲಿ ತಹಶಿಲ್ದಾರ್ ಗೆ ವರದಿ ನೀಡುತ್ತಾರೆ. ಸಂಬಂಧಪಟ್ಟ ತಹಶೀಲ್ದಾರ್ ಈ ಕುರಿತು ಬಹಿರಂಗ ಪ್ರಕಟಣೆ ನೀಡುತ್ತಾರೆ. ಇಷ್ಟಾಗಿಯೂ ಯಾರೂ ಬಾರದಿದ್ದ ಪಕ್ಷದಲ್ಲಿ ವಾರಸುದಾರರು ಇಲ್ಲದ ಆಸ್ತಿಯನ್ನು ಎಶ್ಚಿಯೇಟ್ ಮೂಲಕ ಆಸ್ತಿಯನ್ನು ಸರ್ಕಾರ ವಶಕ್ಕೆ ಪಡೆದುಕೊಳ್ಳುತ್ತದೆ. ಸರ್ಕಾರ ಎಶ್ಚಿಯೇಟ್ ಮೂಲಕ ಪಡೆದ ಬಳಿಕ ಆ ಆಸ್ತಿಗೆ ಯಾರಾದರೂ ವಾರಸುದಾರಿಗೆ ಕ್ಲೇಮ್ ಮಾಡಿದಾಗ ಅದರ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿ ಸತ್ಯ ಕಂಡು ಬಂದಲ್ಲಿ ವಾಪಸು ನೀಡಲಾಗುತ್ತದೆ. ಇಲ್ಲದಿದ್ದರೆ ಆಸ್ತಿಯ ದಾಖಲೆಗಳಲ್ಲಿ ಸರ್ಕಾರಿ ಜಾಗ ಎಂದು ನಮೂದಿಸಲಾಗುತ್ತದೆ. ಆ ಬಳಿಕ ಭು ಕೃಷಿ ಜಮೀನು ಆಗಿದ್ದಲ್ಲಿ ಅದನ್ನು ಅರ್ಹರಿಗೆ ಮಂಜೂರು ಮಾಡುತ್ತದೆ.

ಎಶ್ಚಿಯೇಟ್ ಕಾನೂನು ಜಾರಿ ಮಾಡುವ ವ್ಯವಸ್ಥೆ ಇಲ್ಲ: ಕರ್ನಾಟಕದಲ್ಲಿ ಸಾವಿರಾರು ಕೋಟಿ ರೂಪಾಯಿ ಆಸ್ತಿಗಳು ವಾರಸುದಾರರು ಇಲ್ಲದೇ ಪಾಳು ಬಿದ್ದಿವೆ. ಆದರೆ ಈ ಕಾನೂನನ್ನು ಜಾರಿ ಮಾಡುವ ಸುವ್ಯವಸ್ಥಿತ ಪ್ರಾಧಿಕಾರ ರಚನೆ ಮಾಡಿಲ್ಲ. ವಾರಸುದಾರರು ಇಲ್ಲದ ಆಸ್ತಿಗಳ ಪತ್ತೆಗೆ ನಮ್ಮ ರಾಜ್ಯದಲ್ಲಿ ಯಾವುದೇ ಅಧಿಕಾರಿ ವರ್ಗ, ಪ್ರತ್ಯೇಕ ವ್ಯವಸ್ಥೆ ರೂಪಿಸಿಲ್ಲ. ಒಂದು ವೇಳೆ ವಾರಸುದಾರರು ಇಲ್ಲದ ಆಸ್ತಿಗಳು ಕಂಡು ಬಂದರೆ, ಅಧಿಕಾರಿಗಳೇ ಸುಳ್ಳು ವಾರಸುದಾರರನ್ನು ಸೃಷ್ಟಿಸಿ ಲಪಟಾಯಿಸುತ್ತಿದ್ದಾರೆ. ಹೀಗಾಗಿ ಈ ಪ್ರಕರಣಗಳು ಬೆಳಕಿಗೆ ಈವರೆಗೂ ಬಂದಿದ್ದೇ ಅಪರೂಪ.

ರಾಜ್ಯದಲ್ಲಿ ಎಶ್ಚಿಯೇಟ್ ಜಾರಿ ಸಂಬಂಧ ಪ್ರತ್ಯೇಕ ಪ್ರಾಧಿಕಾರ ರಚಿಸಿ ವಾರಸುದಾರರು ಇಲ್ಲದ ಆಸ್ತಿಗಳ ಪತ್ತೆಗೆ ಸರ್ಕಾರ ಮುಂದಾದಲ್ಲಿ ಕೋಟ್ಯಂತರ ರೂಪಾಯಿ ಆದಾಯ ಹರಿದು ಬರಬಹುದು. ಇದರಿಂದ ವಾರಸುದಾರರು ಇಲ್ಲದೇ ಪಾಳು ಬಿದ್ದಿರುವ ಅನೇಕ ಆಸ್ತಿಗಳು ಪತ್ತೆಯಾಗುತ್ತವೆ. ಆದರೆ ಸರ್ಕಾರಕ್ಕೆ ಈ ಕುರಿತು ಇಚ್ಛಾಶಕ್ತಿ ತೋರಿದಲ್ಲಿ ಮಾತ್ರ ಅದು ಸಾಧ್ಯವಾಗುತ್ತದೆ.

Exit mobile version