ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ

0
137

ಮಡಿಕೇರಿ ;50 ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆ ಅರಣ್ಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.ಮಡಿಕೇರಿಯ ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂರ್ಣಿಮಾ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಇದೀಗ ಅವರನ್ನು ಬಂಧಿಸಲಾಗಿದೆ.ತನ್ನ ಅಧೀನದಲ್ಲಿ ಕೆಲಸಮಾಡುತ್ತಿದ್ದ ಅಧಿಕಾರಿಯಿಂದ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ,

ಹೊದ್ದೂರು ವಾಟೆಕಾಡು ನರ್ಸರಿಯಲ್ಲಿ ಕರ್ತವ್ಯ ನಿರ್ವಹಿಸಲು ಇಬ್ಬರು ವಾಚರ್‌ಗಳನ್ನು ನೇಮಿಸಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಅದರಂತೆ ಒಬ್ಬರು ವಾಚರ್‌ನ್ನು ನೇಮಿಸಿಕೊಂಡು ಸರ್ಕಾರದ ನಿಯಮದಂತೆ ತಿಂಗಳಿಗೆ 15.೦೦೦ ರೂ. ವೇತನ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಡಿಎಫ್‌ಓ ಪೂರ್ಣಿಮಾ ಇನ್ನೊಬ್ಬ ವಾಚರ್‌ನ್ನು ನೇಮಿಸಿಕೊಂಡಂತೆ ಸುಳ್ಳುದಾಖಲೆ ಸೃಷ್ಟಿಮಾಡಿ ವಾಚರ್‌ನ ಪ್ರತಿ ತಿಂಗಳ ವೇತನವನ್ನು ತನಗೆ ಕೊಡುವಂತೆ ಒತ್ತಾಯಿಸುತ್ತಿದ್ದರು ಎಂದು ಮಯೂರ ಉದಯ ಕಾರವೇಕರ ಆರೋಪಿಸಿದ್ದಾರೆ. ಇಲಾಖೆಯಿಂದ ₹ 1.60 ಲಕ್ಷ ವೆಚ್ಚದಲ್ಲಿ 2 ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇದರಲ್ಲಿ ಶೇ 60ರಷ್ಟು ಹಣವನ್ನು ತನಗೆ ನೀಡಬೇಕು ಎಂದು ಆರೋಪಿ ಪೂರ್ಣಿಮಾ ತನ್ನ ಅಧೀನ ಅಧಿಕಾರಿಯನ್ನು ಪೀಡಿಸುತ್ತಿದ್ದರು.

ಈ ಕಾಮಗಾರಿಯನ್ನು ಲಂಚ ಪಡೆಯದೇ ಕೈಗೊಂಡಿರುವುದಾಗಿ ಹೇಳಿದರೂ 1 ಲಕ್ಷ ಹಣ ನೀಡಬೇಕು. ಇಲ್ಲದೇ ಇದ್ದರೆ ಅಮಾನತುಪಡಿಸಲಾಗುವುದು ಎಂದು ಬೆದರಿಕೆಯನ್ನೂ ಅವರು ತನ್ನ ಅಧೀನ ಅಧಿಕಾರಿಗೆ ಒಡ್ಡಿದ್ದರು.ಇದರ ಮುಂಗಡ ಹಣವಾಗಿ 50 ಸಾವಿರವನ್ನು ಅರಣ್ಯ ಭವನದ ಮುಂಭಾಗ ಇರುವ ತನ್ನ ಜೀಪಿನಲ್ಲಿ ಹಾಕುವಂತೆ ಪೂರ್ಣಿಮಾ ಸೂಚಿಸಿದ್ದರು. ಅದರಂತೆ ಅಧೀನ ಅಧಿಕಾರಿಯು ಗುರುವಾರ ಸಂಜೆ ಜೀಪಿನಲ್ಲಿ ಲಂಚದ ಹಣ ಹಾಕುತ್ತಿದ್ದಂತೆ ಪೂರ್ಣಿಮಾ ಅವರನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಪೂರ್ಣಿಮಾ ಅವರು ಮೊದಲಿನಿಂದಲೂ ಲಂಚವನ್ನು ನೇರವಾಗಿ ಕೇಳಿ ಪಡೆಯುತ್ತಿದ್ದರು. ಲಂಚ ಕೊಡದಿದ್ರೆ ಬೆದರಿಕೆ ಹಾಕಿ ಲಂಚ ಪಡೆಯುತ್ತಿದ್ದರು. ಅರಣ್ಯ ಇಲಾಖೆಯಲ್ಲಿ ನಡೆಯುವ ಯಾವುದೇ ಕಾಮಗಾರಿಗಳಿಗೂ ಶೇ60ರಷ್ಟು ಬೇಡಿಕೆ ಇಡುತ್ತಿದ್ದರು ಎಂದು ಇಲಾಖೆಯಲ್ಲಿ‌ ಕೆಲಸ‌ ಮಾಡುವ ಅಧಿಕಾರಿಗಳು ಆರೋಪ‌ ಮಾಡಿದ್ದಾರೆ.ಮೈಸೂರು ವಿಭಾಗದ ಲೋಕಾಯುಕ್ತ ಎಸ್‌.ಪಿ ಸುರೇಶ್‌ ಬಾಬು ಅವರ ಮಾರ್ಗದರ್ಶನದಲ್ಲಿ, ಮೈಸೂರಿನ ಡಿವೈಎಸ್‌’ಪಿ ಕೃಷ್ಣಯ್ಯ, ಮಡಿಕೇರಿಯ ಡಿವೈಎಸ್‌’ಪಿ ಪವನ್‌ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್, ಜಯರತ್ನಾ, ಸಿಬ್ಬಂದಿಯಾದ ಲೋಕೇಶ್, ಮಂಜುನಾಥ, ಸಲಾಹುದ್ದೀನ್, ದೀಪಿಕಾ, ಅರುಣ್‌ ಕುಮಾರ್, ಶಶಿ, ತ್ರಿವೇಣಿ, ಪ್ರಕಾಶ್, ಲೋಕೇಶ್ ಕಾರ್ಯಾಚರಣೆ ತಂಡದಲ್ಲಿದ್ದರು.