Revenue Facts

ಶಿವರಾತ್ರಿ ಹಬ್ಬವನ್ನು ಕತ್ತಲಲ್ಲಿ ಆಚರಿಸುವುದೇಕೆ..?

ಬೆಂಗಳೂರು, ಫೆ. 18 : ಮಾಘಮಾಸ ಕೃಷ್ಣಪಕ್ಷದ ಚತುರ್ದಶೀ ತಿಥಿಯಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ರಾತ್ರಿಯೆಲ್ಲಾ ಪರಮೇಶ್ವರನನ್ನು ಸ್ಮರಿಸುತ್ತಾ ಜಾಗರಣೆ ಮಾಡಿ ಆರಾಧಿಸುವ ಪರ್ವಕಾಲವಿದು. ಈಶ್ವರನನ್ನು ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ. ಈಶ್ವರನಿಗೆ ಪಂಚಾಮೃತಾಭಿಷೇಕ, ಗಂಗಾಭಿಷೇಕವನ್ನು ಮಾಡಿ ತ್ರಿದಳ ಬಿಲ್ವಪತ್ರಗಳಿಂದ ಪರಮೇಶ್ವರನನ್ನು ಪೂಜಿಸುವುದು ಪದ್ಧತಿ. ಇಂದು ಪಂಚಾಕ್ಷರೀಮಂತ್ರವನ್ನು ಜಪಿಸುತ್ತಾ, ಪರಶಿವನನ್ನು ಸಂತೋಷಗೊಳಿಸಿ ಬೇಡಿಕೆ ಇಟ್ಟು ವರ ಪಡೆಯಲಾಗುತ್ತೆ.

ಸಾಮಾನ್ಯವಾಗಿ ಎಲ್ಲಾ ಹಬ್ಬಗಳನ್ನು ಹಗಲಿನಲ್ಲಿ ಆಚರಿಸಲಾಗುತ್ತೆ. ಆದರೆ, ಶಿವರಾತ್ರಿಯು ಹಗಲಿನಲ್ಲಿ ಪೂಜೆ ಮಾಡಿ ಉಪವಾಸವಿದ್ದರೂ ಕೂಡ ರಾತ್ರಿ ಜಾಗರಣೆ ಮಾಡಿ ಹಬ್ಬ ಆಚರಿಸಲಾಗುವುದು. ಪರಮೇಶ್ವರನಿಗೆ ರಾತ್ರಿಯಲ್ಲಿಯೇ ಪೂಜೆಯಾಗಬೇಕು. ಅಮಂಗಳ ವಾದ ಅಂದರೆ ಅಶಿವವಾದ ರಾತ್ರಿಯನ್ನು ಶಿವವನ್ನಾಗಿಸುವ, ಮಂಗಳವನ್ನಾಗಿ ಸುವ ಈಶ್ವರನ ಈ ಆರಾಧನೆಯ ಹಬ್ಬಕ್ಕೆ ಶಿವರಾತ್ರಿ ಎಂದೇ ಹೆಸರಾಯಿತು. ಪರಮಮಂಗಳಮೂರ್ತಿಯಾದ ಸಚ್ಚಿದಾನಂದಸ್ವರೂಪಿಯಾದ ಪರಮೇಶ್ವರನ ಸಂಬಂಧದಿಂದ, ಅಮಂಗಳ ಸ್ವರೂಪವಾದ ರಾತ್ರಿಯೂ ಮಂಗಳವೇ ಆಗಿ ಬಿಡುತ್ತದೆ.

ಆದ್ದರಿಂದ ಇದು ಶಿವರಾತ್ರಿ ಹಬ್ಬವಾಯಿತು. ಇನ್ನು ಸಂಸಾರಿಗಳಾದ ಅಜ್ಞಾನಾಂಧಕಾರದಲ್ಲಿ ಮುಳುಗಿರುವ ಜೀವರುಗಳೂ ಕೂಡ ಈ ಶಿವನ ಆರಾಧನೆಯಿಂದ ಶಿವಸ್ವರೂಪರೇ ಮಂಗಳಸ್ವರೂಪರೇ ಆಗಿಬಿಡುತ್ತಾರಲ್ಲವೆ? ಇಂದು ಸಂಜೆ ಆರು ಘಂಟೆಯಿಂದ ನಾಳೆ ಬೆಳಗ್ಗೆ ಆರು ಘಂಟೆಯವರೆಗೂ, ಅಂದರೆ ಹನ್ನೆರಡು ಘಂಟೆಗಳ ಕಾಲವೂ ಶಿವನ ಆರಾಧನೆಯಲ್ಲಿಯೇ ಸಮಯ ವನ್ನು ಕಳೆಯುವವರಿಗೆ ಎಲ್ಲವೂ ಶಿವವೇ, ಮಂಗಳವೇ ಆಗಿಬಿಡುತ್ತದೆ. ಆದ್ದರಿಂದಲೇ ಇದು ಮಹಾಶಿವರಾತ್ರಿ ಎನಿಸಿಕೊಂಡಿರುತ್ತದೆ.

Exit mobile version