Revenue Facts

ಕಾಂಗ್ರೆಸ್ ಗೆ ರಾಜೀನಾಮೆ: ಬಿಜೆಪಿಗೆ ಮರಳಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್

#Resignation # Congress #Former #CM Jagdish Shettar #returned # BJP

ಬೆಂಗಳೂರು;ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಿಂದ(BJP) ಕಾಂಗ್ರೆಸ್‌ಗೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್(Jagdish Shettar) ಅವರು ಲೋಕಸಭಾ ಚುನಾವನೆಗೂ ಮುನ್ನವೇ ಬಿಜೆಪಿಗೆ ವಾಪಾಸ್ ಆಗಿದ್ದಾರೆ. ಬಿಜೆಪಿಗೆ ಮರುಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಇ-ಮೇಲ್ ಮೂಲಕ ಕಾಂಗ್ರೆಸ್‌ ಅಧ್ಯಕ್ಷರಿಗೆ ಕಳುಹಿಸಿದ್ದಾರೆ. ಮತ್ತೆ ಬಿಜೆಪಿ ಪಕ್ಷಕ್ಕೆ ವಾಪಸ್‌ ಬರುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ ಎಂದು ಶೆಟ್ಟ‌ರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಮೋದಿ ನಾಯಕತ್ವವನ್ನು ಹೊಗಳಿದ ಶೆಟ್ಟ‌ರ್, ಬಿಜೆಪಿ ವರಿಷ್ಠರಿಗೆ ಧನ್ಯವಾದ ತಿಳಿಸಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರು ಜಗದೀಶ್ ಶೆಟ್ಟ‌ರ್ ಅವರನ್ನು ಬಿಜೆಪಿಗೆ ಸ್ವಾಗತಿಸಿದರು. ನೀವು ಮತ್ತೆ ಪಕ್ಷಕ್ಕೆ ವಾಪಸ್ ಬರಬೇಕೆಂದು ರಾಷ್ಟ್ರೀಯ ನಾಯಕರು ಒತ್ತಾಯಿಸುತ್ತಿದ್ದರು. ಅಮಿತ್ ಶಾರನ್ನು ಬೆಳಗ್ಗೆಯಷ್ಟೇ ಭೇಟಿ ಮಾಡಿದ್ದೆ. ನಡ್ಡಾರನ್ನೂ ಭೇಟಿಯಾಗುವೆ. ಸಭಾಪತಿ ಬಸವರಾಜ ಹೊರಟ್ಟಿಗೆ ಇ-ಮೇಲ್ ಮುಖೇನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ.ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು. ನಾನು ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್​ನವರು ಕೂಡ ಒಳ್ಳೇ ಗೌರವ, ಸ್ಥಾನಮಾನ ನೀಡಿದ್ದರು. ಕಾಂಗ್ರೆಸ್​ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದ ರಾಜೀನಾಮೆ ಪತ್ರ ರವಾನಿಸಿದ್ದೇನೆ ಎಂದಿದ್ದಾರೆ.ರಾಜಕೀಯ ಮರುಜನ್ಮ ಕೊಟ್ಟಿದ್ದ ಕಾಂಗ್ರೆಸ್‌ಗೆ ಜಗದೀಶ್ ಶೆಟ್ಟರ್ ವಿಶ್ವಾಸದ್ರೋಹ ಮಾಡಿದ್ದಾರೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ನಿನ್ನೆ ತನಕ ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯಲ್ಲ ಎಂದು ವೈಯಕ್ತಿಕವಾಗಿ ಹೇಳಿದ್ದ ಅವರು, ಇಂದು ಬಿಜೆಪಿ ಸೇರ್ಪಡೆಯಾಗಿ ಮಾತು ತಪ್ಪಿದ್ದಾರೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್‌ನಲ್ಲಿ ಶೆಟ್ಟ‌ರ್ ಅವರನ್ನು ಬಹಳ ಗೌರವಯುತವಾಗಿ ನೋಡಿಕೊಳ್ಳಲಾಗಿತ್ತು. ಚುನಾವಣೆ ಸೋತರೂ ಅವರನ್ನು ಪರಿಷತ್ ಸದಸ್ಯನನ್ನಾಗಿ ಮಾಡಿ ಗೌರವ ಕೊಟ್ಟಿತ್ತು ಎಂದಿದ್ದಾರೆ.

Exit mobile version