![](https://revenuefacts.com/wp-content/uploads/2022/09/justice.jpg?v=1671892965)
ಒಂದು ಸ್ಥಿರಾಸ್ತಿಯ ಒಡೆತನ ಬಗ್ಗೆ ವಿವಾದ ಉಂಟಾಗಿ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದರೂ ಸಹ ಸಂಬಂಧಪಟ್ಟ ಜಮೀನನ್ನು ಅನ್ಯರ ಹೆಸರಿನಲ್ಲಿ ನೋಂದಣಿ ಮಾಡಿಸುತ್ತಾರೆ. ಜಮೀನು ಕುರಿತು ತಕರಾರು ಇದ್ದು, ಈ ಬಗ್ಗೆ ದೂರು ಕೊಟ್ಟರೂ ಬೇರೆಯವರ ಹೆಸರಿಗೆ ನೋಂದಣಿ ಮಾಡಿಬಿಡುತ್ತಾರೆ ಉಪ ನೋಂದಣಿ ಅಧಿಕಾರಿಗಳು. ಅಷ್ಟಕ್ಕೆ ಅಯ್ಯೊ ಆಸ್ತಿ ರಿಜಿಸ್ಟ್ರೇಷನ್ ಆಗೇ ಬಿಡ್ತು ಎಂದು ದಾಯಾದಿಗಳು ಹೊಡೆದಾಡಿಕೊಂಡು ಜೈಲು ಸೇರಿದ ನಿದರ್ಶನಗಳು ಇವೆ. ಇನ್ನೂ ಎಷ್ಟೋ ಮಂದಿ ಆಸ್ತಿ ಕಲಹಗಳಲ್ಲಿ ಜೀವವನ್ನೇ ಕಳೆದುಕೊಂಡಿದ್ದಾರೆ. ವಾಸ್ತವದಲ್ಲಿ ಜಮೀನು ಒಡೆತನ ಬಗ್ಗೆ ತಕರಾರು ಇದ್ದರೆ, ಅದರ ಬಗ್ಗೆ ದೂರು ಕೊಟ್ಟರೂ ಅದನ್ನು ಪರಿಗಣಿಸದೇ ಬೇರೆಯವರಿಗೆ ಪರಭಾರೆ ಮಾಡಿದರೂ ಜನ ಸಾಮಾನ್ಯರು ಆತಂಕ ಪಡುವ ಅಗತ್ಯವಿಲ್ಲ. ಯಾಕೆಂದರೆ ನೋಂದಣಿ ಮತ್ತು ಮುದ್ರಾಂಕ ಕಾಯ್ದೆಯ ಈ ನಿಯಮಗಳು ತಿಳಿದುಕೊಂಡಿದ್ದರೆ ಸಾಕು, ವಿವಾದ ಸಲೀಸಾಗಿ ಬಗೆಹರಿಸಿಕೊಳ್ಳಬಹುದು.
ಪಿತ್ರಾರ್ಜಿತ ಆಸ್ತಿಯ ಬಗ್ಗೆ ಇನ್ನೂ ಇತ್ಯರ್ಥ ಆಗಿರುವುದಿಲ್ಲ. ಸಹೋದರಲ್ಲಿ ವೈಮನಸ್ಯ ಬೆಳೆದು ಜಗಳ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಆಸ್ತಿಯನ್ನೇ ಮಾರಾಟ ಮಾಡಿ ನೋಂದಣಿ ಮಾಡಿಸುತ್ತಾರೆ. ಜಮೀನು ಹಂಚಿಕೆ ಕುರಿತು ತಕರಾರು ಅರ್ಜಿ ಕೊಟ್ಟರೂ ಸಹ ಏನೂ ಆಗಲ್ಲ. ಅಧಿಕಾರಿಗಳ್ನು ಬುಟ್ಟಿಗೆ ಹಾಕಿಕೊಂಡು ರಿಜಿಸ್ಟ್ರೇಷನ್ ಮಾಡಿದ್ದಾರೆ. ಆಸ್ತಿ ಹೊರಟೇ ಹೋಯ್ತು ಎಂದು ಭಾವಿಸಿ ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತುಕೊಳ್ಳುತ್ತಾರೆ. ವಾಸ್ತವದಲ್ಲಿ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸ್ವಲ್ಪ ಬುದ್ಧಿ ಉಪಯೋಗಿಸಿದರೆ ಯಾವ ಸಮಸ್ಯೆಯೂ ಆಗಲ್ಲ. ಪಿತ್ರಾರ್ಜಿತ ಆಸ್ತಿ ಸೇರಿದಂತೆ ಅರ್ಹರು ಅರ್ಹ ಪಾಲನ್ನು ಪಡೆಯಲು ಹಕ್ಕುದಾರರಾಗಿರುತ್ತಾರೆ. ಈ ಕುರಿತು ನೋಂದಣಿ ನಿಯಮಗಳು ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಸ್ಥಿರಾಸ್ತಿ ಕುರಿತು ಯಾವುದೇ ಪ್ರಕರಣದ ವಿಚಾರಣೆ ಬಾಕಿ ಇರುವಾಗ ವೈಯಕ್ತಿಕವಾಗಿ ಸ್ಥಿರ ಸ್ವತ್ತುಗಳ ಬಗ್ಗೆ ತಕರಾರರು ಇದ್ದರೆ, ಕಂದಾಯ ಅಧಿಕಾರಿಗಳು ತಹಶೀಲ್ದಾರ್, ಉಪ ನೋಂದಣಾಧಿಕಾರಿಗಳು, ಇನ್ನಿತರ ಅಧಿಕಾರಿಗಳು ಹೇಗೆ ನಡೆದುಕೊಳ್ಳಬೇಕು ಎಂದು ನೊಂದಣಿ ನಿಯಮಗಳು ಹೇಳುತ್ತವೆ.
ನೋಂದಣಿ ನಿಯಮ 145 ಏನು ಹೇಳುತ್ತೆ?:
ಯಾವುದೇ ಸ್ಥಿರ ಸ್ವತ್ತುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು, ನ್ಯಾಯಾಲಯಕ್ಕೆ ದಾವೆ ಹೂಡಿದಾಗ, ಅಥವಾ ಕುಟುಂಬದೊಳಗೆ ವ್ಯಾಜ್ಯ ಉಂಟಾಗಿ, ಭಾಗದ ವಿಚಾರದಲ್ಲಿ ತಕಾರರು ಇದ್ದರೆ, ಅನುಮಾನವಿದ್ದಾಗ, ಸಾರ್ವಜನಿಕರು ಸಾಮಾನ್ಯವಾಗಿ ನ್ಯಾಯಾಲಯ ಅಥವಾ ಸಂಬಂಧಪಟ್ಟ ಉಪ ನೋಂದಣಾಧಿಕಾರಿಗಳಿಗೆ / ಜಿಲ್ಲಾ ನೋಂದಣಿ, ತಹಶಿಲ್ದಾರ್ ಗೆ ದೂರು ಅರ್ಜಿ ಕೊಟ್ಟು ತಡೆಹಿಡಿಯುವಂತೆ ಕೋರುವುದು ಸರ್ವೆ ಸಾಮಾನ್ಯ. ಆದರೆ, ಕಾನೂನು ಈ ರೀತಿ ಹೇಳುತ್ತದೆ. ಕರ್ನಾಟಕ ನೋಂದಣಿ ನಿಯಮಗಳು 1965 ರ ನಿಯಮ 145 ಉಪ ನೋಂದಣಾಧಿಕಾರಿಗಳಿಗೆ ತಕರಾರು ಅರ್ಜಿ ನೀಡಿದರೆ, ಅವರು ಅಂತಹ ಅರ್ಜಿಗಳನ್ನು ಸೂಕ್ತ ಹಿಂಬರಹದೊಂದಿಗೆ ಮೂಲ ಅರ್ಜಿಗಳನ್ನು ಸಂಬಂಧಪಟ್ಟ ಪಾರ್ಟಿಗೆ ಹಿಂತಿರಿಗಿಸಬೇಕು. ಈ ಅರ್ಜಿ ಪರಿಗಣಿಸಲ್ಲ. ನಿಮ್ಮ ತಕರಾರಿನ ಬಗ್ಗೆ ನ್ಯಾಯಾಲಯಕ್ಕೆ ಹೊಗಿ ಇತ್ಯರ್ಥ ಪಡಿಸಿಕೊಳ್ಳಿ ಎಂದು ನೊಂದಣಾಧಿಕಾರಿಗಳು ಹಿಂಬರಹ ನಿಡುತ್ತಾರೆ.
ನೋಂದಣಿ ನಿಯಮಗಳು 73 ರ ಅನ್ವಯ ನೋಂದಣಾಧಿಕಾರಿಗಳು ಕರ್ತವ್ಯಗಳ ಬಗ್ಗೆ ಹೇಳುತ್ತದೆ. ಇದರ ಪ್ರಕಾರ ಸಂಬಂದಪಟ್ಟ ಪಾರ್ಟಿಗಳು ದಾಸ್ತವೇಜನ್ನು ಬರೆದುಕೊಟ್ಟಿದ್ದನ್ನು ಒಪ್ಪಿಕೊಂಡರೆ, ನೋಂದಣಾಧಿಕಾರಿಗಳು ಕಡ್ಡಾಯವಾಗಿ ನೋಂದಣಿ ಮಾಡಲೇಬೇಕಿರುತ್ತದೆ.
ಭೂ ಸುಧಾರಣೆ, ಕಂದಾಯ ಕಾಯ್ದೆ ಅನ್ವಯ ನೋಂದಣಾಧಿಕರಿಗಳು ನೋಂದಣಿ ಮಾಡಿದಾಗ ಕಂದಾಯ ಅಧಿಕಾರಿಗಳು ಖಾತೆ, ವರ್ಗಾವಣೆ ಮಾಡಲೇಬೇಕಿರುತ್ತದೆ. (ಕಂದಾಯ ಸಂಗ್ರಹಿಸಿ ) ಇನ್ನು ನ್ಯಾಯಾಲಯದಲ್ಲಿ ದಾವೆ ಹೂಡಿರುವ ಅರ್ಜಿಗಳಿಗೆ ಸಂಬಂಧಿಸದಿಂತೆ ನ್ಯಾಯಾಲಯದ ಅಂತಿಮ ತೀರ್ಮಾನವೇ ಪಾರ್ಟಿಗಳಿಗೆ ಅನ್ವಯ ಆಗುತ್ತದೆ.
ಆದ್ದರಿಂದ ನ್ಯಾಯಾಲಯದಲ್ಲಿ ದಾವೆ ಹೂಡಿದ ನಂತರ, ಎಷ್ಟೇ ವ್ಯವಹಾರ ನಡೆದರೂ, ನೋಂದಣಿಯಾದರೂ, ಖಾತೆ ಮಾಡಿಸಿದರೂ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಡಬೇಕಾಗುತ್ತದೆ. ಹೀಗಾಗಿ ಜನ ಸಾಮಾನ್ಯರು ಆಸ್ತಿ ಕುರಿತ ವಿವಾದಗಳು ಇದ್ದರೆ ಕಂದಾಯ ಅಧಿಕಾರಿಗಳ ಸುತ್ತ ಸುತ್ತಾಡುವುದು, ಹಣ ಕೊಡುವುದು ಬಿಟ್ಟು, ನ್ಯಾಯಾಲಯದಲ್ಲಿ ಜಯ ಗಳಿಸುವುದು ಮುಖ್ಯವಾಗುತ್ತದೆ. ಜನರು ಕಂದಾಯ ಅಧಿಕಾರಿಗಳ ಸುತ್ತ ಮುತ್ತ ತಿರುಗಾಡುವ ಬದಲು ಸಂಬಂಧ ಪಟ್ಟ ಸಿವಿಲ್ ನ್ಯಾಯಾಲಯಕ್ಕೆ ದಾವೆ ಹೂಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಆಗ ನೋಂದಣಿ ಅಧಿಕಾರಿಗಳು ಮಾಡಿರುವ ಎಲ್ಲಾ ನೋಂದಣಿಗಳು ಸಹಜವಾಗಿ ನ್ಯಾಯಾಲಯದ ತೀರ್ಪಿಗೆ ಒಳಪಡುತ್ತವೆ. ಸ್ಥಿರ ಆಸ್ತಿಗಳ ದಾಖಲೆಗಳು ನ್ಯಾಯಾಲದ ತೀರ್ಪಿನ ಅನ್ವಯ ಬದಲಾಗುತ್ತವೆ ಎಂದು ನಿವೃತ್ತ ನೋಂದಣಾಧಿಕಾರಿ ಸಲಹೆ ನೀಡಿದ್ದಾರೆ.