Revenue Facts

ಕರ್ನಾಟಕ ಬಜೆಟ್ :ಎಲ್ಲಾ ಆಸ್ತಿಗಳ ಮಾರ್ಗಸೂಚಿ ದರ ಶೇಕಡ 14 ರಷ್ಟು ಹೆಚ್ಚಳ.

ಬೆಂಗಳೂರು ಜುಲೈ 07: ಕರ್ನಾಟಕದ ನೂತನ ಕಾಂಗ್ರೆಸ್ ಸರ್ಕಾರವು ತನ್ನ ಬಜೆಟ್ ನಲ್ಲಿ ಆಸ್ತಿಗಳ ಮಾರ್ಗಸೂಚಿ ದರವನ್ನು ಶೇ 14ರಷ್ಟು ಹೆಚ್ಚಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಿಲ್ಲ. ಜತೆಗೆ ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ನೀಡಿದ ಗ್ಯಾರಂಟಿಗಳ ಭರವಸೆಯನ್ನು ಜಾರಿಗೆ ತರಲು ಭಾರಿ ಮೊತ್ತದ ಸಂಪನ್ಮೂಲದ ಅಗತ್ಯವಿದೆ. ಈ ಸಂಪನ್ಮೂಲದ ಕ್ರೋಢೀಕರಣಕ್ಕೆ ಮಾರ್ಗಸೂಚಿ ದರ ಏರಿಕೆ ನೆರವಾಗಲಿದೆ ಎಂಬ ನಿರೀಕ್ಷೆಯಿದೆ.

ರಾಜ್ಯ ಕಾಂಗ್ರೆಸ್‌ ಸರಕಾರವು ತನ್ನ ಚುನಾವಣಾ ಖಾತರಿ ಯೋಜನೆಗಳ ಜಾರಿಗೆ ಆರ್ಥಿಕ ಸಂಪನ್ಮೂಲ ಕ್ರೊಢೀಕರಣಕ್ಕಾಗಿ ಆಸ್ತಿಗಳ ಮಾರ್ಗಸೂಚಿ ದರವನ್ನು ಶೇಕಡ 14 ರಷ್ಟು ಹೆಚ್ಚಳ ಮಾಡಿದೆ.

“ಆಸ್ತಿಗಳ ಮಾರ್ಗಸೂಚಿ ದರ ಶೇಕಡ 14 ರಷ್ಟು ಹೆಚ್ಚಳ”ಆದಾಯ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಲಿದೆ:-

”ರಿಯಲ್‌ ಎಸ್ಟೇಟ್ ‌ ಉದ್ಯಮದ ಬೆಳವಣಿಗೆ ಆರೋಗ್ಯಕರವಾಗಿದೆ. ಆದಾಯ ಸಂಗ್ರಹಣೆ ಹೆಚ್ಚಿಸಲು ಸಾಧ್ಯವಿರುವ ಎಲ್ಲವಿಧಾನಗಳನ್ನು ನಾವು ಅನ್ವೇಷಿಸುತ್ತಿದ್ದೇವೆ,” ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಮಹಾ ನಿರೀಕ್ಷಕಿ ಬಿ.ಆರ್‌ ಮಮತಾ ತಿಳಿಸಿದ್ದಾರೆ.

”ಮಾರ್ಗಸೂಚಿ ದರ ಹೆಚ್ಚಳವು ಆಸ್ತಿಗಳ ಮಾರುಕಟ್ಟೆ ಬೆಲೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಹೆಚ್ಚಿನ ಆಸ್ತಿಗಳನ್ನು ಮಾರ್ಗಸೂಚಿ ದರದ ಮೇಲೆ ನೋಂದಾಯಿಸಲಾಗುತ್ತಿದೆ. 4 ವರ್ಷಗಳಿಂದ ಮಾರ್ಗಸೂಚಿ ದರ ಪರಿಷ್ಕರಿಸದ ಕಾರಣ ಇದು ಕೆಳಗಿದೆ. ಹೀಗಾಗಿ, ಸರಕಾರದ ಆದಾಯ ಹಾಗೂ ಗ್ರಾಹಕರ ಹಿತಾಸಕ್ತಿ ಎರಡಕ್ಕೂ ಈ ಹೆಚ್ಚಳವಾಗಿದೆ” ಎಂದು ಸಚಿವರೊಬ್ಬರು ಹೇಳಿದ್ದಾರೆ.

ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಲಿರುವ ಮಾರ್ಗಸೂಚಿ ದರದಲ್ಲಿನ ಹೆಚ್ಚಳ:-

”ಮಾರ್ಗಸೂಚಿ ದರದಲ್ಲಿನ ಹೆಚ್ಚಳವು ಖಂಡಿತವಾಗಿ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ರಿಯಲ್‌ ಎಸ್ಟೇಟ್ ‌ ವಲಯವು ನಿಧಾನಗೊಳ್ಳುತ್ತದೆ. ವಾಸ್ತವವಾಗಿ ಕಳೆದ ವರ್ಷ ನೀಡಲಾದ ಶೇ 10ರಷ್ಟು ರಿಯಾಯಿತಿ ದರವನ್ನು ಕಡಿಮೆ ಮಾಡುವುದರಿಂದ ಮಾರಾಟ ಹೆಚ್ಚಾಗುತ್ತದೆ ಮತ್ತು ಆ ಮೂಲಕ ಆದಾಯ ಹೆಚ್ಚಾಗುತ್ತದೆ,” ಎಂದು ಕ್ರೆಡೈ ಬೆಂಗಳೂರು ಅಧ್ಯಕ್ಷ ಭಾಸ್ಕರ್‌ ನಾಗೇಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

”ರಿಯಲ್‌ ಎಸ್ಟೇಟ್ ‌ ಉದ್ಯಮದ ಬೆಳವಣಿಗೆ ಆಧರಿಸಿ ಮಾರ್ಗಸೂಚಿ ದರ ಹೆಚ್ಚಿಸುವ ಮೂಲಕ ಮತ್ತು ವೆಬ್‌ ಆಧಾರಿತ ಕಾವೇರಿ 2.0 ಆಪ್‌ ಅನುಷ್ಠಾನವನ್ನು ಬೆಂಗಳೂರಿನಂತಹ ನಗರಗಳಿಗೆ ವಿಸ್ತರಿಸುವ ಮೂಲಕ ಆಸ್ತಿಗಳ ನೋಂದಣಿಗೆ ಒತ್ತು ನೀಡಲು ಸರಕಾರ ನಿರ್ಧರಿಸಿದೆ,” ಎಂದು ಸಚಿವರೊಬ್ಬರು ಹೇಳಿದ್ದಾರೆ.

”ಕೋವಿಡ್ ‌ ಕಾರಣಕ್ಕೆ 2019ರಿಂದ ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಮಾಡಿಲ್ಲ. ಆದರೆ, ಪ್ರತಿ ವರ್ಷ ಮಾರ್ಗಸೂಚಿ ದರ ಪರಿಷ್ಕರಿಸಿ ಶೇ 15ರಷ್ಟು ಹೆಚ್ಚಳ ಮಾಡಬೇಕು. ಮಾರ್ಗಸೂಚಿ ದರ ಹೆಚ್ಚಿಸುವ ಇಲಾಖೆಯ ಪ್ರಸ್ತಾವವನ್ನು ಹಿಂದಿನ ಬಿಜೆಪಿ ಸರಕಾರ ಅನುಮೋದಿಸಿತ್ತು. ಇದೀಗ ಇಲಾಖೆಯು ಅಗತ್ಯವಿದ್ದರೆ ಹೊಸ ಸರಕಾರಕ್ಕೆ ಹೊಸದಾಗಿ ಪ್ರಸ್ತಾವ ಸಲ್ಲಿಸಬಹುದಾಗಿದೆ,” ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾವೇರಿ 2.0 ಆಪ್ ಬಿಡುಗಡೆಗೊಡಿಸಲಿರುವ ಮುದ್ರಾಂಕ ಇಲಾಖೆ:-

ಖರೀದಿದಾರನು ಆಸ್ತಿ ಬೆಲೆ ಲೆಕ್ಕಿಸದೆ ಮುದ್ರಾಂಕ ಶುಲ್ಕದ ಮೇಲೆ ಶೇ 1ರಷ್ಟು ನೋಂದಣಿ ಶುಲ್ಕ ಪಾವತಿಸಬೇಕಾಗುತ್ತದೆ. ಹೀಗಾಗಿ, ಮಾರ್ಗಸೂಚಿ ದರ ಹೆಚ್ಚಳವು ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಬೆಂಗಳೂರಿನ 45 ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ವೆಬ್‌ ಆಧಾರಿತ ಕಾವೇರಿ 2.0 ಅಪ್ಲಿಕೇಶನ್‌ ಬಿಡುಗಡೆ ಮಾಡಲು ಮತ್ತು ಆಸ್ತಿ ಹಾಗೂ ಇತರೆ ದಾಖಲೆಗಳ ಪೂರ್ಣ ಪ್ರಮಾಣದ ಆನ್‌ಲೈನ್‌ ನೋಂದಣಿಗೆ ಸರಕಾರ ಸಿದ್ಧತೆ ನಡೆಸಿದೆ.

ಆಸ್ತಿಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವುದರಿಂದ ಸರಕಾರಕ್ಕೆ ಕನಿಷ್ಠ ಶೇ 20 ಆದಾಯ ಜಾಸ್ತಿಯಾಗಲಿದೆ ಎಂಬ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಗಸೂಚಿ ದರ ಏರಿಕೆ ಮಾಡುವ ಪರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾರ್ಗಸೂಚಿ ದರವು ಆಸ್ತಿ ವಹಿವಾಟನ್ನು ನೋಂದಾಯಿಸುವ ಕನಿಷ್ಠ ಬೆಲೆಯಾಗಿದೆ. ಆಸ್ತಿ ಇರುವ ಪ್ರದೇಶವನ್ನು ಅವಲಂಬಿಸಿ ಸರಕಾರ ಅದರ ಮೌಲ್ಯ ನಿಗದಿಪಡಿಸುತ್ತದೆ. ಇದರ ಆಧಾರದ ಮೇಲೆ ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು ಲೆಕ್ಕ ಹಾಕುವುದರಿಂದ ಇದು ಗಮನಾರ್ಹವಾಗಿದೆ.

Exit mobile version