ಬೆಂಗಳೂರು;ಕರ್ನಾಟಕದ ಹೃದಯಭಾಗದಲ್ಲಿರುವ ಹೊಯ್ಸಳ ದೇವಾಲಯಗಳು ಪ್ರತಿಷ್ಠಿತ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆಯುವ ‘ ಮೂಲಕ ಜಾಗತಿಕ ಮನ್ನಣೆ ಸಾಧಿಸಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯವು ಕಳೆದ ವರ್ಷ ಇವುಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಅಧಿಕೃತ ನಾಮನಿರ್ದೇಶನಗಳಾಗಿ ಕಳುಹಿಸಿತ್ತು. ಈ ಮನ್ನಣೆಯು ದೇಶದ ಶ್ರೀಮಂತ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಅಂಗೀಕಾರದಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಯೂನೆಸ್ಕೋ ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿಗೆ ಹಾಸನ ಜಿಲ್ಲೆಯ ಬೇಲೂರು, ಹಳೆಬೀಡು ಮತ್ತು ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲಗಳು ಸೇರ್ಪಡೆಯಾಗಿವೆ.ಸೋಮವಾರ ಸೌದಿ ಅರೆಬಿಯಾದ ರಾಜಧಾನಿ ರಿಯಾದ್ನಲ್ಲಿ ನಡೆದ ಯೂನೆಸ್ಕೋದ 45ನೇ ಸರ್ವ ಸದಸ್ಯರ ಸಭೆಯಲ್ಲಿ ಈ ಮೂರು ದೇಗುಲಗಳನ್ನು ಯುನೆಸ್ಕೊದ ಪಟ್ಟಿಗೆ ಸೇರಿಸಲಾಗಿದೆ. ಈಗಾಗಲೇ ರಾಜ್ಯದ ಪಶ್ಚಿಮಘಟ್ಟ ಪ್ರದೇಶ, ಹಂಪೆ, ಯುನೆಸ್ಕೊದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ,ಹೊಯ್ಸಳ ದೇವಾಲಯಗಳು, ಏಪ್ರಿಲ್ 2014 ರಿಂದಲೂ ಯುನೆಸ್ಕೊದ ತಾತ್ಕಾಲಿಕ ಪಟ್ಟಿಯಲ್ಲಿದ್ದವು. 2022-23 ಕ್ಕೆ ವಿಶ್ವ ಪಾರಂಪರಿಕ ತಾಣವಾಗಿ ಪರಿಗಣಿಸಲು ಜನವರಿ 2022 ರಲ್ಲಿ ಭಾರತದಿಂದ ನಾಮನಿರ್ದೇಶನ ಮಾಡಲಾಗಿತ್ತು. ಸರ್ಕಾರದ ಮನವಿಗೆ ಒಪ್ಪಿ ಈಗ ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದನ್ನು ವಿಶ್ವಸಂಸ್ಥೆಯು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಪೋಸ್ಟ್ನಲ್ಲಿ, “ಭಾರತಕ್ಕೆ ಹೆಚ್ಚು ಹೆಮ್ಮೆ!ಹೊಯ್ಸಳರ ಭವ್ಯವಾದ ಪವಿತ್ರ ಮೇಳಗಳನ್ನು UNESCO ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿದೆ. ಹೊಯ್ಸಳ ದೇವಾಲಯಗಳ ಕಾಲಾತೀತ ಸೌಂದರ್ಯ ಮತ್ತು ಸಂಕೀರ್ಣ ವಿವರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಜರ ಅಸಾಧಾರಣ ಕರಕುಶಲತೆಗೆ ಸಾಕ್ಷಿಯಾಗಿದೆ.” ಎಂದಿದ್ದಾರೆ.
ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಹೊಯ್ಸಳ ದೇವಾಲಯಗಳು
