Revenue Facts

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ : ಲಕ್ಷಕ್ಕೂ ಅಧಿಕ ಎ ಖಾತಾ ರದ್ದು

ಬೆಂಗಳೂರು, ಮಾ. 09 : ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗ ಬಿ ಖಾತಾ ಹೊಂದಿರುವವ ಅರ್ಹರಿಗೆ ಎ ಖಾತೆ ನೀಡುವ ಆಂದೋಲನ ನಡೆಯುತ್ತಿದೆ. ಹೀಗಿರುವಾಗಲೇ ಎ ಖಾತೆ ಹೊಂದಿರುವ ಲಕ್ಷಕ್ಕೂ ಅಧಿಕ ಎ ಖಾತಾಗಳನ್ನು ಬಿಬಿಎಂಪಿ ರದ್ದುಗೊಳಿಸಿದೆ. ಬಿಬಿಎಂಪಿಯ 243 ವಾರ್ಡ್ಗಳಲ್ಲಿ ಅಂದಾಜು ಒಂದು ಲಕ್ಷ ‘ಎ’ ಖಾತಾಗಳು ಅಕ್ರಮವಾಗಿ ನೋಂದಣಿಯಾಗಿವೆ. ಈ ಬಗ್ಗೆ ಪರಿಶೀಲನಾ ಸಮಿತಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ. ನಗರದಲ್ಲಿ ಅಕ್ರಮವಾಗಿ ಎ ಖಾತೆ ಮಾಡಲಾಗಿದೆ ಎಂದು ನೀಡಿದ್ದ ದೂರಿನ ಸಂಬಂಧ ಪರಿಶೀಲನೆಗೆ ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲಾ ಖಾತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಆಸ್ತಿಗೆ ಎ ಖಾತೆ ನೀಡಬೇಕೆಂದರೆ, ಅಭಿವೃದ್ಧಿ ಶುಲ್ಕ ಹಾಗೂ ಇತರೆ ಶುಲ್ಕಗಳ ಜೊತೆಗೆ ದಾಖಲೆಗಳನ್ನು ಕೂಡ ಸಲ್ಲಿಸಿರಬೇಕು. ಆದರೆ ಇದ್ಯಾವುದಋ ಬಗ್ಗೆಯೂ ಪರಿಗಣನೆಗೂ ತೆಗೆದುಕೊಳ್ಳದ ಸಹಾಯಕ ಕಂದಾಯ ಅಧಿಕಾರಿಗಳು ಆಸ್ತಿಯನ್ನು ಎ ಖಾತಾಗೆ ನಮೂದನೆ ಮಾಡಲಾಗಿದೆ. ಬಿಬಿಎಂಪಿಗೆ ಮಾತ್ರ ಯಾವ ಶುಲ್ಕಗಳು ಕೂಡ ಸಂದಾಯವಾಗಿಲ್ಲ. ಹಳೆಯ ಆಸ್ತಿಗಳನ್ನು ನಮೂದಿಸಿರುವ ರಿಜಿಸ್ಟರ್‌ ನಲ್ಲೇ ಹೊಸ ಆಸ್ತಿಗಳನ್ನು ನಮೂದಿಸಲಾಗಿದೆ. ಹಳೆಯ ಆಸ್ತಿಗಳ ನಡುವಲ್ಲಿ ಹೊಸ ಆಸ್ತಿಯನ್ನು ಉಪಸಂಖ್ಯೆಯಾಗಿ ಸೇರಿಸಲಾಗಿದೆ. ಅಂದರೆ, ಹಳೆಯ ಆಸ್ತಿಯ ಸಂಖ್ಯೆ 105 ಮತ್ತು 106 ಇದ್ದರೆ, ಇದರ ನಡುವೆ 105/1 ಎಂದು ಹೊಸ ಆಸ್ತಿಯ ಸಂಖ್ಯೆ ಅನ್ನು ನಮೂದನೆ ಮಾಡಲಾಗಿದೆ.

ಇದರಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗಿದ್ದು, ಇದೆರಡು ನಡುವಲ್ಲಿ ಹೊಸ ಆಸ್ತಿಯನ್ನು ಸೇರಿಸುವುದರಿಂದ ಇದು ಹಳೆಯ ನೋಂದಣಿ ಎಂದು ತಿಳಿದುಕೊಳ್ಳುತತೀವಿ ಎಂದು ಅವರ ಲೆಕ್ಕಾಚಾರ ಎಂದು ಹೇಳಲಾಗಿದೆ. ಕೆಲವು ರಿಜಿಸ್ಟರ್‌ ನಲ್ಲಿ ಮಾಲೀಕರ ಹೆಸರು ಮತ್ತು ಖಾತೆಯ ಸಂಖ್ಯೆ ಅನ್ನು ಮಾತ್ರವೇ ನಮೂದಿಸಲಾಗಿದೆ. ಇನ್ನು ಒಂದೇ ರಿಜಿಸ್ಟರ್‌ ನಲ್ಲಿ ವ್ಯಕ್ತಿಯೊಬ್ಬರ ಹೆಸರನ್ನು ಅಲ್ಲಲ್ಲಿ ಸೇರಿಸಲಾಗಿದೆ. ಈ ಮೂಲಕ ಆ ವ್ಯಕ್ತಿಗೆ ಎ ಖಾತೆಯನ್ನು ನೀಡಲಾಗಿದೆ. ಅದೆಲ್ಲವೂ ಉಪ-ಸಂಖ್ಯೆಯಲ್ಲೇ ನಮೂದನೆಗೊಂಡಿವೆ. ರಿಜಿಸ್ಟರ್‌ ಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರೆ, ನಡೆದಿರುವ ಅಕ್ರಮ ಹೊರ ಬರುತ್ತದೆ ಎಂದು ಹೇಳಲಾಗಿದೆ.

ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಅಂಜನಾಪುರದ ಎರಡು ವಾರ್ಡ್ ಗಳಲ್ಲೇ ಬರೋಬ್ಬರಿ 800 ಅಕ್ರಮ ಆಸ್ತಿಗಳು ಪತ್ತೆಯಾಗಿವೆ. ಎರಡು ವಾರ್ಡ್‌ ನಲ್ಲೇ ಇಷ್ಟೋಂದು ಅಕ್ರಮ ಕಂಡು ಬಂದಿದೆ ಎಂದರೆ, ಉಳಿದ ವಾರ್ಡ್‌ ಗಳಲ್ಲಿ ಎಷ್ಟು ಅಕ್ರಮ ನಡೆದಿರಬಹುದು ಎಂದು ಪ್ರಶ್ನೆ ಒಂದು ಎದ್ದಿದೆ. ಹೀಗಾಗಿ ಸಹಾಯಕ ಕಂದಾಯ ಅಧಿಕಾರಿಗಳು ಅಕ್ರಮದ ಬಗ್ಗೆ ಮಾಹಿತಿಯನ್ನು ನೀಡಬೇಕು. ಇಲ್ಲದೆ ಇದ್ದಲ್ಲಿ ಪರಿಶೀಲನಾ ಸಮಿತಿಗೆ ಅಕ್ರಮ ತಿಳಿದು ಬಂದರೆ, ಆಯಾ ಎಆರ್‌ಒಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಹೇಳಿದ್ದಾರೆ.

Exit mobile version