Revenue Facts

ಡಿನೋಟಿಫಿಕೇಷನ್ ಹಗರಣದಲ್ಲಿ ಸಿದ್ದರಾಮಯ್ಯ: ಲೋಕಾಯುಕ್ತದಲ್ಲಿ ದೂರು ದಾಖಲು

ಬೆಂಗಳೂರು, ಅ. 12: ಸರ್ಕಾರಿ ಸತ್ವತ್ತನ್ನು ಡಿ ನೋಟಿಫೈ ಮಾಡಿರುವ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಬಿಜೆಪಿ ಮುಖಂಡ ಎನ್‌.ಆರ್. ರಮೇಶ್ ಅವರು ಈ ದೂರು ದಾಖಲಿಸಿದ್ದಾರೆ.

“ಬೆಂಗಳೂರಿನ ಲಾಲ್‌ಬಾಗ್ ಸಮೀಪದ ಸಿದ್ಧಾಪುರ ಗ್ರಾಮದ 2 ಎಕರೆ 39.5 ಗುಂಟೆ ಜಮೀನು ದುರುಪಯೋಗ ಮಾಡಿಕೊಳ್ಳಲಾಗಿದೆ. ಸಿದ್ದರಾಮಯ್ಯ ಅವರು ಸರ್ಕಾರಿ ಕಾನೂನುಗಳನ್ನು ಗಾಳಿಗೆ ತೂರಿ ಈ ಸ್ವತ್ತನ್ನು ಡಿನೋಟಿಫೈ ಮಾಡಿದ್ದಾರೆ,” ಎಂದು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ದೂರು ದಾಖಲು ಮಾಡಿದ್ದಾರೆ.

200 ಕೋಟಿ ಸರ್ಕಾರಿ ಸ್ವತ್ತು:
ಸಿದ್ದರಾಮಯ್ಯ ಅವರು ಡಿನೋಟಿಫೈ ಮಾಡಿರುವ ಜಮೀನಿನ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು 200 ಕೋಟಿ ರೂಪಾಯಿ ಆಗುತ್ತದೆ. ಬಿಡಿಎ ಉದ್ಯಾನವನ, ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನ ಬಿಲ್ಡರ್‌ಗೆ ಅನುಕೂಲ ಆಗುವ ರೀತಿಯಲ್ಲಿ ಡಿನೋಟಿಫೈ ಮಾಡಿದ್ದಾರ ಎಂದು ಎನ್‌.ಆರ್. ರಮೇಶ್ ಆರೋಪ ಮಾಡಿದ್ದಾರೆ.

ನಿಗದಿತ ಜಾಗದಲ್ಲಿ ಹಲವು ನರ್ಸರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಈ ಜಾಗವನ್ನು ಅಶೋಕ್ ಧಾರಿವಾಲ್ ಎಂಬ ಖಾಸಗಿ ಬಿಲ್ಡರ್ ಗೆ ಅನುಕೂಲಮಾಡಿಕೊಟ್ಟಿದ್ದಾರೆ. ವಾಣಿಜ್ಯ ಸಂಕೀರ್ಣ ಬಳಕೆಗಾಗಿ ಈ ಜಾಗ ನೀಡುವಂತೆ ಅಶೋಕ್ ಧಾರಿವಾಲ್ ಎಂಬುವರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅಶೋಕ್ ಧಾರಿವಾಲ್ ಸಲ್ಲಿಸಿದ್ದ ಅರ್ಜಿಗಳನ್ನು 2013ಕ್ಕೂ ಮುನ್ನ ಎರಡು ಬಾರಿ ತಿರಸ್ಕಾರ ಮಾಡಲಾಗಿತ್ತು. 2014ರಲ್ಲಿ ಅಶೋಕ್ ಧಾರಿವಾಲ್ ಮತ್ತೊಮ್ಮೆ ಅರ್ಜಿ ಸಲ್ಲಿಸುತ್ತಿದ್ದಂತೆ ಅಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಎನ್‌.ಆರ್. ರಮೇಶ್ ವಿವರಿಸಿದ್ದಾರೆ.

ಸಾರ್ವಜನಿಕರ ಬಳಕೆಗೆ ಮೀಸಲಿಟ್ಟ ಜಾಗವನ್ನ ಅಭಿವೃದ್ಧಿ ಮಾಡುವಂತಿಲ್ಲ ಹಾಗೂ ಬದಲಿಗೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂಬ ಆದೇಶವಿದೆ. ಡಿನೋಟಿಫೈ ಮಾಡುವ ಮದೊಲು ಬಿಎಂಪಿಸಿ (Bangalore Metropolitan Planning Committee) ಒಪ್ಪಿಗೆ ಅಗತ್ಯ. 2014ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಬಿಎಂಪಿಸಿ ಒಪ್ಪಿಗೆ ಪಡೆಯದೆ ಡಿನೋಟಿಫೈ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಡಿನೋಟಿಫೈ ಬದಲಿಗೆ ರಿಡೂ:
De – Notify” ಎಂಬುದರ ಬದಲಾಗಿ “Re Do” ಎಂಬ ಪದ ಬಳಸಿ ಈ ಕಾನೂನು ಬಾಹಿರ ಕಾರ್ಯಮಾಡಿದ್ದಾರೆ. ಡಿನೋಟಿಫಿಕೇಷನ್ ಮಾಡಲು ಸಹಕರಿಸಿದ ಅಂದಿನ ಬಿಡಿಎ ಆಯುಕ್ತ ಶಾಂಭಟ್ ವಿರುದ್ಧವೂ ದಹ ದೂರು ದಾಖಲಿಸಲಾಗಿದೆ. ಕೂಡಲೇ ಇದನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ರಮೇಶ್ ಆಗ್ರಹಿಸಿದ್ದಾರೆ.

Exit mobile version