Revenue Facts

ಸಚಿವ ಜೈಶಂಕರ್ ಸೇರಿ 11 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ

ನವದೆಹಲಿ, ಜುಲೈ 18;ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್‌ ಓಬ್ರಿಯಾನ್ ಸೇರಿ 11 ಮಂದಿ ನಾಯಕರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬಿಜೆಪಿ ಒಂದು ಸ್ಥಾನವನ್ನು ಗಳಿಸಿ ರಾಜ್ಯಸಭೆಯಲ್ಲಿ 93 ಸದಸ್ಯರ ಬಲ ಹೊಂದಿದೆ. 6 ತೃಣಮೂಲ ಕಾಂಗ್ರೆಸ್ ಮತ್ತು 5 ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಜುಲೈ 24ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ 11 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಹೊರಡಿಸಿದ ಅಧಿಸೂಚನೆಯ ಪ್ರಕಾರ, ನಾಮಪತ್ರ ಸಲ್ಲಿಸಿದ್ದ ಸ್ಥಾನಗಳಿಗೆ ಎದುರಾಳಿ ಅಭ್ಯರ್ಥಿಗಳೇ ಇಲ್ಲದ ಕಾರಣ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಫಲಿತಾಂಶವನ್ನು ಇಂದೇ ಘೋಷಿಸಲಾಗಿದೆ.ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 105 ಸದಸ್ಯರನ್ನು ಹೊಂದಿದ್ದು, ಐವರು ನಾಮನಿರ್ದೇಶಿತ ಮತ್ತು ಇಬ್ಬರು ಸ್ವತಂತ್ರ ಸಂಸದರ ಬೆಂಬಲವನ್ನೂ ಬಿಜೆಪಿ ಗೆಲ್ಲಲಿದೆ. ಹಾಗಾಗಿ ಸರ್ಕಾರದ ಪರವಾಗಿ ಇರುವ ಸದಸ್ಯರ ಸಂಖ್ಯೆ 112 ಆಗಲಿದ್ದು, ಬಹುಮತಕ್ಕೆ ಎಂಟು ಸ್ಥಾನಗಳು ಕಡಿಮೆ ಇರಲಿದೆ.ಟಿಎಂಸಿಯ ಆರು ಮಂದಿ ಅಭ್ಯರ್ಥಿಗಳಾದ ಸುಖೇಂದು ಶೇಖರ್ ರಾಯ್, ಡೋಲಾ ಸೋನಾ, ಸಾಕೇತ್ ಗೋಖಲೆ, ಸಮೀರುಲ್ ಇಸ್ಲಾಂ, ಪ್ರಕಾಶ್ ಬಾರಿಕ್, ಡೆರೆಕ್ ಒ’ಬ್ರಯಾನ್​​ ಅವಿರೋಧ ಆಯ್ಕೆಯಾಗಿದ್ದಾರೆ.

Exit mobile version