Revenue Facts

ಶೀಘ್ರದಲ್ಲೇ 1 ಸಾವಿರ ಸರ್ವೇಯರ್ ಗಳ ನೇಮಕ- ಕಂದಾಯ ಸಚಿವ ಕೃಷ್ಣಭೈರೇಗೌಡ

ಶೀಘ್ರದಲ್ಲೇ 1 ಸಾವಿರ ಸರ್ವೇಯರ್ ಗಳ ನೇಮಕ- ಕಂದಾಯ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು: ರೈತರ ಜಮೀನುಗಳನ್ನ ಸರ್ವೆ ಮಾಡಲು ಅನುಕೂಲವಾಗುವಂತೆ ಹೈಟೆಕ್ ಉಪಕರಣಗಳ ಕಿಟ್‌ಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು ರಾಜ್ಯದಲ್ಲಿ ಭೂಮಾಪನ ನಡೆಸಲು ಸಿಬ್ಬಂದಿ ಕೊರತೆ ಇದೆ. ಈ ಕಾರಣದಿಂದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಇದು ತಮ್ಮ ಗಮನದಲ್ಲಿದ್ದು ಶೀಘ್ರದಲ್ಲೇ 1 ಸಾವಿರಕ್ಕೂ ಹೆಚ್ಚು ಭೂಮಾಪಕರನ್ನು ಸರ್ಕಾರ ನೇಮಕ ಮಾಡಿಕೊಳ್ಳಲಿದೆ ಎಂದರು. ಇದರ ಮೊದಲ ಹಂತದಲ್ಲಿ 367 ಭೂಮಾಪಕರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು

ರಾಜ್ಯದಲ್ಲಿ ಪ್ರಸ್ತುತ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ಮೂಲಕ ಸರ್ವೇಯರ್ ಗಳ ನೇಮಕ ಆಗುತ್ತಿದೆ. ಇದರ ಜೊತೆಗೆ ಖಾಲಿ ಇರುವ ಇತರೆ ಹುದ್ದೆಗಳ ನೇಮಕಾತಿಗೂ ಸರ್ಕಾರ ಸದ್ಯದಲ್ಲೇ ಚಾಲನೆ ನೀಡಲಿದೆ ಎಂದು ಕೃಷ್ಣಭೈರೇಗೌಡ ಹೇಳಿದರು. ಅಲ್ಲದೇ ತಹಶೀಲ್ದಾರ್ ಕಚೇರಿ, ಸರ್ವೆ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿನ ಎಲ್ಲಾ ದಾಖಲೆಗಳನ್ನೂ ಪ್ರತಿ ಜಿಲ್ಲೆ ಹಾಗೂ ಪ್ರತಿ ತಾಲೂಕಿನಲ್ಲ ಭೂ ಸುರಕ್ಷಾ ಯೋಜನೆಯಡಿ ಡಿಜಿಟಲೀಕರಣ ಮಾಡಲಾಗುವುದೆಂದರು. ಇದರಿಂದ ದಾಖಲೆಗಳ ಕಳ್ಳತನ, ದುರ್ಬಳಕೆ ಆಗುವುದನ್ನ ತಡೆಯಬಹುದು ಎಂದು ಸಚಿವರು ತಿಳಿಸಿದರು. ಎಲ್ಲದಕ್ಕಿಂತ ಹೆಚ್ಚಾಗಿ ಜನರು ತಮ್ಮ ಊರುಗಳಿಂದ ಕಚೇರಿಗಳಿಗೆ ಅಲೆಯುವುದು ತಪ್ಪಲಿದ್ದು, ಆನ್ಲೈನ್ನಲ್ಲೇ ದಾಖಲೆಗಳನ್ನು ಪರಿಶೀಲಿಸಬಹುದು ಎಂದರು.

ಇದೇ ವೇಳೆ ತಮ್ಮ ಕಾರ್ಯವೈಖರಿಯ ಬಗ್ಗೆ ವಿವರಿಸಿದ ಸಚಿವರು ತಾವು ಕಂದಾಯ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ತಹಶೀಲ್ದಾರ್,ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿ ಉಳಿದಿದ್ದವು. ಈಗ ಅವೆಲ್ಲಾ ಪ್ರಕರಣಗಳು ತ್ವರಿತವಾಗಿ ಇತ್ಯರ್ಥ ಆಗುತ್ತಾ ಇವೆ. ಈ ಮೊದಲು ತಹಶೀಲ್ದಾರ್ ನ್ಯಾಯಾಲಾಯದಲ್ಲಿ 2,215 ಪ್ರಕರಣಗಳು ಇದ್ದವು. ಈಗ ಅದರ ಸಂಖ್ಯೆ 107ಕ್ಕೆ ಇಳಿದಿದೆ. ಅದರಂತೆ ಸಹಾಯಕ ಆಯುಕ್ತರ ನ್ಯಾಯಾಲಯಗಳಲ್ಲಿದ್ದ 60 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ 34,377ಗಳಷ್ಟೇ ಉಳಿದಿವೆ. ಅವುಗಳನ್ನೂ ಬೇಗ ಇತ್ಯರ್ಥಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Exit mobile version